ನಮ್ ಭಾರತೀಯರಿಗೆ ಹಣಕಾಸು ಜ್ಞಾನವೇ ಇಲ್ವಂತೆ!

ಚಾಣಕ್ಯನಾಣೆಗೂ...: ನಿಜಕ್ಕೂ ಇದನ್ನು ನಂಬಬೇಕಾ!? ನಮ್ಮಲ್ಲಿರುವ ಚೌಕಾಸಿ ಬುದ್ಧಿ, ಜಿಪುಣತನ, ಹೊಟ್ಟೆ-ಬಟ್ಟೆಗೆ ಕಟ್ಟಿ ಕೂಡಿಡುವ ಬುದ್ಧಿ ಧಾರಾಳವಾಗಿದ್ದರೂ ಈ 'ಅಪವಾದವಾ' ಎಂದು ಅಟ್ಟಿಸಿಕೊಂಡು ಬರಬೇಡಿ. ಏಕೆಂದರೆ ಇದು, ವಾಸ್ತವ. ಅದೂ ಇಂದಿನ ಎಂಎನ್ ಸಿ, ಗ್ಲೋಬಲೈಸೇಶನ್ ವ್ಯವಸ್ಥೆಗಳ ಮಧ್ಯೆ ನಾವು ಕಳೆದುಹೋಗಿದ್ದೇವೆ.
ಆದರೂ ಈ ಜಾಗತಿಕ ಮಂದಿ ಏನೇ ಹೇಳಲಿ. ನಮ್ಮ ಭಾರತೀಯರಲ್ಲಿರುವ ಹಣಕಾಸು ಬುದ್ಧಿ ಆ ಚಾಣಕ್ಯನಾಣೆಗೂ ಹತ್ತು ಮಂದಿಗೆ ಆಗಿ ಮಿಗುವಂತಹುದು ಎಂದು ಎದೆತಟ್ಟಿ ಹೇಳಿಕೊಳ್ಳಬಹುದು.
ಆದರೂ ಇಷ್ಟಕ್ಕೇ ತೃಪ್ತಪಟ್ಟಿಕೊಳ್ಳದೇ ಈ ಜಾಗತಿಕ ಹೋರಾಟದ ಮಧ್ಯೆ ಕಣ್ತೆರೆದು ನೋಡುವುದಾದರೆ 'ನಮ್ ಭಾರತೀಯರಿಗೆ ಹಣಕಾಸು ಬಗ್ಗೆ ಜ್ಞಾನವೇ ಇಲ್ಲ' ಎಂಬುದು ಒಪ್ಪತಕ್ಕ ವಿಚಾರವೇ. ಹೇಗೆ ಅಂತೀರಾ? ಮುಂದಕ್ಕೆ ಓದಿಕೊಳ್ಳಿ.
Visa credit card ಕಂಪನಿಯ ಅಂಕಿ ಅಂಶಗಳ ಪ್ರಕಾರ ಭಾರತದ ಯುವಜನತೆ ಮತ್ತು ಮಹಿಳೆಯರು ಈ ಹಣಕಾಸು ಅರೆಜ್ಞಾನದದಿಂದ ಬಳಲುತ್ತಿದ್ದಾರೆ. ಯಾಕಪ್ಪಾ ಹೀಗೆ ಅಂದರೆ ಇವರು ಯಾರೂ ತಮ್ಮ ಹಣಕಾಸಿನ ಬಗ್ಗೆ ಮನೆಗಳಲ್ಲಿ ಮುಕ್ತರಾಗಿ ಮಾತನಾಡೊಲ್ಲ. ನಿಮ್ಮ ಪರ್ಸ್ ಮುಟ್ಟಿಕೊಳ್ಳುತ್ತಾ, ನಿಮ್ಮ ego ಪಕ್ಕಕ್ಕಿಟ್ಟು ಈಗ ಹೇಳಿ, ನೀವು ನಿಮ್ಮ ಮನೆಯವರ ಜತೆ ಯಾವತ್ತಾದರೂ financial plan ಬಗ್ಗೆ ಮಾತನಾಡಿದ್ದೀರಾ? ಇಲ್ಲಾ ಅಲ್ವಾ. ಅದ್ಕೇಯಾ ಹೇಳಿದ್ದು. ಹಣಕಾಸು ವಿಚಾರದಲ್ಲಿ ನಾವು ಮೂದೇವಿಗಳು ಅಂತ.
Global Financial literacy barometer ಅನುಸಾರ ಸಂದರ್ಶಿಸಿದ 28 ರಾಷ್ಟ್ರಗಳ ಪೈಕಿ ಭಾರತ 23 ನೇ ಸ್ಥಾನದಲ್ಲಿ ತಳಕಚ್ಚಿದೆ. ಭಾರತದಲ್ಲಿ ಶೇ. 35 ಮಂದಿಗೆ ಹಣಕಾಸು ಅಜ್ಞಾನ ಕಾಡುತ್ತಿದೆ. ಅದೇ ಬ್ರೆಜಿಲಿನಲ್ಲಿ ನೋಡ್ರೀ...ಅರ್ಧಕ್ಕರ್ಧ ಮಂದಿ ಹಣಕಾಸು ಜ್ಞಾನಿಗಳು. ಮೆಕ್ಸಿಕೋ, ಆಸ್ಟ್ರೇಲಿಯಾ, ಅಮೆರಿಕ ಮತ್ತು ಕೆನಡಾ ಮಂದಿಯೂ ಕಡಿಮೆಯೇನಿಲ್ಲ. ಅವರ ಹಣಕಾಸು ಲೆಕ್ಕಾಚಾರವೂ ಉತ್ತಮವಾಗಿಯೇ ಇದೆ.
ಈ ಅಮೆರಿಕ, ಮೆಕ್ಸಿಕೋ, ಕೆನಡಾ ಮಂದಿಗೆ ಮೊನ್ನೆ ಹಣಕಾಸು ಹಿಂಜರಿತ ಬಡಿದಿತ್ತು. ಅದರಿಂದ ಅವರು ಚೇತರಿಸಿಕೊಂಡ ಲಕ್ಷಣಗಳು ಇನ್ನೂ ಗೋಚರಿಸುತ್ತಿಲ್ಲ. ಅದೇ ಭಾರತಕ್ಕೂ ಹಿಂಜರಿತ ಬಡಿಯಿತು. ಆದರೆ ಯಾರಿಗೂ ಅಂಥ ಪ್ರಮಾದವೇನೂ ಆಗಲಿಲ್ಲ. ಏಕೆಂದರೆ ಮೇಲೆ ಹೇಳಿದಂತೆ ನಮ್ಮಲ್ಲಿನ ಚೌಕಾಸಿ ಬುದ್ಧಿ, ಜಿಪುಣತನ, ಹೊಟ್ಟೆ-ಬಟ್ಟೆಗೆ ಕಟ್ಟಿ ಕೂಡಿಡುವ ಧಾರಾಳ ಬುದ್ಧಿ ಆಪತ್ಭಾಂದವನಂತೆ ನಮ್ಮ ಕೈಹಿಡಿತ್ತು. ಆದರೂ ಈ ಸಮೀಕ್ಷೆ ಏನು ಹೇಳುತ್ತಿದೆ. ಒಂಚೂರು ಕೇಳಿ ತಿಳಿದುಕೊಂಡು ಮತ್ತಷ್ಟು ಜಾಣರಾಗೋಣ, ಬಿಡಿ. ಅದಕ್ಕೇನು ಕಾಸು ಕೊಡಬೇಕಾ, ದುಡ್ಡು ಕೊಡಬೇಕಾ !?
ಈ ಶೇ. 35 ಮಂದಿ ಭಾರತೀಯರು ಆಗ್ಲೇ ಹೇಳಿದಂತೆ ಯಾರದೋ ಅಲ್ಲ ತಮ್ಮದೇ ಕುಟುಂಬದ ಆರ್ಥಿಕ ವಿಚಾರಗಳ ಬಗ್ಗೆ ಮಾತನಾಡಲೊಲ್ಲರು. ಕುಟುಂಬದ ಹಿರಿತಲೆಗಳು ತಮ್ಮ ಕುಡಿಗಳೊಂದಿಗೆ ವರ್ಷಕ್ಕೆ ಅಬ್ಬಬ್ಬಾ ಅಂದರೆ 10 ದಿನ ಮಾತ್ನಾಡ್ತಾರಂತೆ! ಅದೇ ಜಾಗತಿಕ ಮಂದಿ ವರ್ಷಕ್ಕೆ 20 ದಿನ ಹಣಕಾಸಿನ ಬಗ್ಗೆ ಚರ್ಚಿಸ್ತಾರಂತೆ. Gud habits!
ಕಟುವಾಸ್ತವವೆಂದರೆ ವಯಸ್ಸಾದವರಿಗಿಂತ ಯುವಜನತೆಗೆ ಯಾವುದೇ ತುರ್ತು ಹಣಕಾಸು ಪರಿಸ್ಥಿತಿಗಳನ್ನು ಎದುರಿಸಲು ಚೈತನ್ಯವೇ ಇರುವುದಿಲ್ಲ. ಏಕೆಂದರೆ ಭವಿಷ್ಯದ ದೃಷ್ಟಿಕೋನದಿಂದ ಅವರಲ್ಲಿ financial planing ಇರುವುದೇ ಇಲ್ಲ. ಇದೇ ನಿಜಕ್ಕೂ ಆತಂಕದ ವಿಷಯವಾಗಿರುವುದು.
'ಅಯ್ಯೋ ಅದೆಲ್ಲ ನಮಗ್ಯಾಕೆ. ಮನೆ ಯಜಮಾನ ನೋಡ್ಕೋತಾನೆ ಬಿಡಿ' ಎಂದು (ಅಡುಗೇ ಮನೆಯಲ್ಲಿ) ಕೈತೊಳೆದುಕೊಳ್ಳುವ ಹೆಣ್ಣುಮಕ್ಕಳು ಯಾಕಪ್ಪಾ ಹೀಗೆ ಹೇಳುತ್ತಾರೆ ಎಂಬುದರ ಬಗ್ಗೆ ಈ ಜಾಗತಿಕ ಪ್ರಭೃತಿಗಳು ಅಧ್ಯಯನ ನಡೆಸಿದ್ದಾರೆ. ಮತ್ತು ತಮಗೆ ತಾವು ಹೀಗೆ ಬುದ್ಧಿವಾದ ಹೇಳಿಕೊಂಡಿದ್ದಾರೆ - ಈ ಹೆಣ್ಣುಮಕ್ಕಳು ಮತ್ತು ಯುವಜನತೆಗೆ ವೈಯಕ್ತಿಕ ಹಣಕಾಸು ನಿರ್ವಹಣೆ ಬಗ್ಗೆ ಕಾಲಕಾಲಕ್ಕೆ ಅರಿವು ಮೂಡಿಸುವುದು ಇಂದಿನ ಜರೂರುತ್ತು ಮತ್ತು ನಮ್ಮ ಹೊಣೆಗಾರಿಕೆಯೂ ಹೌದು. ನೀವೇನ್ ಹೇಳ್ತೀರಿ !?












Click it and Unblock the Notifications