8 ಯುವತಿಯರ ಮದುವೆಯಾದ ರಸಿಕ ಶಿಖಾಮಣಿ

ಆದರೆ ಅವನ ಆಟ ಹೆಚ್ಚು ದಿನ ನಡೆಯಲಿಲ್ಲ. ಇಲ್ಲಾಂದ್ರೆ ಪಾಪಿ ಇನ್ನೂ ಎಷ್ಟು ಯುವತಿಯರ ಬಾಳು ಹಾಳು ಮಾಡುತ್ತಿದ್ದನೋ. ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಹೀಗೆ ಆಟ ಶುರುವಿಟ್ಟುಕೊಂಡಿದ್ದ ಸುಕುಮಾರನ ಹೆಸರು ರಾಜೇಶ್ ಅಂಚನ್ ಅಲಿಯಾಸ್ ಸುಕುಮಾರ.
ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರ ನೆರವಿನೊಂದಿಗೆ ಮಡಿಕೇರಿ ಪೊಲೀಸರು ಈ ಸುಕುಮಾರನನ್ನು ಶನಿವಾರ (ಜೂನ್ 9) ಬಂಧಿಸಿದ್ದಾರೆ. ಇಂತಿಪ್ಪ ಸುಕುಮಾರ ಈಗ ನ್ಯಾಯಾಂಗ ಕಟಕಟೆಯಲ್ಲಿದ್ದಾನೆ.
ಎಂಟು ವರ್ಷಗಳ ಹಿಂದೆಯೇ ಒಂದೊಂದೇ ಮದುವೆಯಾಗುವ ಚಟ ಬೆಳೆಸಿಕೊಂಡ ಸುಕುಮಾರ, ದೇರಳಕಟ್ಟೆ ಮೀನಾಕ್ಷಿ, ಕಾಸರಗೋಡು ಶಾಂಭವಿ, ಉಪ್ಪಿನಂಗಡಿ ಅಂಡೇದಡ್ಕ ಜಯಂತಿ, ಬೆಲಪು ಪ್ರೇಮಾ, ಧರ್ಮಸ್ಥಳ ಕನ್ಯಾಡಿ ರಜನಿ, ಮಲ್ಪೆ ಬೆಂಗ್ರೆ ರೇವತಿ, ಮಡಿಕೇರಿ ಸುನಂದಾ ಮತ್ತು ಮಣಿ ಅನಂತಾಡಿ ಶುಭಾ ಎಂಬ ಕನ್ಯಾಮಣಿಗಳನ್ನು ವರಿಸಿದ್ದ.
ಹೀಗೆ ಒಂದೊಂದೇ ಮದುವೆಗಳನ್ನಾದ ಈ ಪುಣ್ಯಾತ್ಮನಿಂದಾಗಿ ದೇರಳಕಟ್ಟೆ ಮೀನಾಕ್ಷಿಗೆ ಈಗ 7 ವರ್ಷದ ಮಗನಿದ್ದಾನೆ. ಕಾಸರಗೋಡು ಶಾಂಭವಿಗೆ 5 ವರ್ಷದ ಮಗಳು, ಬೆಲಪು ಪ್ರೇಮಾಗೆ 6 ವರ್ಷದ ಪುತ್ರ, ಮಡಿಕೇರಿ ಸುನಂದಾಗೆ 2 ವರ್ಷಷದ ಪುತ್ರನನ್ನು ಕರುಣಿಸಿದ್ದಾನೆ. ಉಪ್ಪಿನಂಗಡಿ ಅಂಡೇದಡ್ಕ ಜಯಂತಿ ಕೈಗೆ 9 ತಿಂಗಳ ಪುತ್ರನನ್ನು ಕೊಟ್ಟಿರುವ ಸುಕುಮಾರ, ಮಣಿ ಅನಂತಾಡಿ ಶುಭಾಳನ್ನು ಈಗ ಗರ್ಭವತಿ ಮಾಡಿದ್ದಾನೆ.
ಸುಕುಮಾರ ಈ ಸರಸ ಸಲ್ಲಾಪದ ಚರಿತ್ರೆ ನೋಡಿದರೆ ಇದೇ ಕಾಯಕವನ್ನು full time ಉದ್ಯೋಗವನ್ನಾಗಿಸಿಕೊಂಡಿದ್ದ ಎಂದು ಹೇಳಬಹುದು. ಆದರೂ ಉದ್ಯೋಗಂ ಪುರುಷ ಲಕ್ಷಣಂ ಎನ್ನುವಂತೆ ಇರಲಿ ಒಂದು ಉದ್ಯೋಗ ಎಂದು ಹೋಟೆಲುಗಳಲ್ಲಿ ಅಡುಗೆ ಭಟ್ಟನಾಗಿ ದುಡಿಯುತ್ತಿದ್ದ. ಸುಕುಮಾರ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಿನಿಗೋಳಿ ಸಮೀಪದ ಸಿಮಾಂತೂರಿನವ.
ಹೇಗೆ ಸಿಕ್ಕಿಬಿದ್ದ?: ಯುವತಿಯರ ಕೈಗೆ ಮಕ್ಕಳನ್ನು ಕರುಣಿಸುತ್ತಿದ್ದ ಭೂಪನ ಕೈಗೆ ಪೊಲೀಸರು ಕೋಳ ತೊಡಿಸಿದ್ದು ಕೊಡಗು ಜಿಲ್ಲೆಯ ಸೋಮವಾರ ಪೇಟೆಯಲ್ಲಿ. 23 ವರ್ಷದ ಮಣಿ ಅನಂತಾಡಿ ಶುಭಾ ಅಮಾಯಕಳಾಗಿ ತನ್ನ ಗಂಡ ನಾಪತ್ತೆಯಾಗಿದ್ದಾನೆ ಎಂದು ವಿಟ್ಟಲ ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಆತನ ಫೋಟೋ ಸಮೇತ ಸ್ಥಳೀಯ ಪತ್ರಿಕೆಗಳನ್ನು ಮೇ 16ರಂದು ಸುದ್ದಿ ಹಾಕಿಸಿದರು.
ಮಾರನೆಯ ದಿನವೇ (ಮೇ 17ರಂದು) ಸುಕುಮಾರನ ಗ್ರಹಚಾರ ಗೆಟ್ಟಿತು. ಮಲ್ಪೆ ಬೆಂಗ್ರೆ ರೇವತಿ ಪೇಪರಿನಲ್ಲಿ ತನ್ನ ಗಂಡ ನಾಪತ್ತೆಯಾಗಿರುವ ಸುದ್ದಿ ನೋಡಿ ಗಾಬರಿಗೆ ಬಿದ್ದಳು. ಆಗ ಜಯಕರ್ನಾಟಕ ಸಂಘಟನೆ ರೇವತಿ ನೆರವಿಗೆ ಬಂದಿತು.
ಸುಕುಮಾರನ ಬಗ್ಗೆ ಮತ್ತೊಂದಿಷ್ಟು ಕೇಳಿ: ಅವ ಮೃದುಭಾಷಿ. ಯಾರನ್ನು ಬೇಕಾದರೂ ನಯವಾಗಿ ಯಾಮಾರಿಸಬಲ್ಲ ನಿಪುಣ. ಸುಕುಮಾರನ ಈ ಚಾಕಚಕತ್ಯೆಯೇ 8 ಯುವತಿಯರ ಬಾಳನ್ನು ಹಾಳು ಮಾಡಿರುವುದು.












Click it and Unblock the Notifications