ಬಿಜೆಪಿಗೆ ಗುಡ್ ಬೈ ಹೇಳಿದ ಸಂಜಯ್ ಜೋಶಿ
ಚುನಾವಣಾ ಉಸ್ತುವಾರಿ, ರಾಷ್ಟ್ರಮಟ್ಟದಲ್ಲಿ ಕಾರ್ಯಕಾರಿಯಿಂದ ಸಂಜಯ್ ಅವರನ್ನು ಹೊರದಬ್ಬುವಲ್ಲಿ ಯಶಸ್ವಿಯಾಗಿದ್ದ ನರೇಂದ್ರ ಮೋದಿ ಅವರು ಈಗ ಬಿಜೆಪಿಯಿಂದಲೇ ಹೊರಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಆದರೆ, ಸಂಜಯ್ ಜೋಶಿ ರಾಜೀನಾಮೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸಂಜಯ್ ಅವರು ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಸಂಜಯ್ ಜೋಶಿ ಅವರ ರಾಜೀನಾಮೆ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಇತ್ತೀಚೆಗೆ ನರೇಂದ್ರ ಮೋದಿಯನ್ನು ಬೆಂಬಲಿಸಿ ತನ್ನ ಮುಖವಾಣಿ ಪಾಂಚಜನ್ಯ, ಅರ್ಗನೈಸರ್ ನಲ್ಲಿ ಮೋದಿ ಅವರನ್ನು ಆರೆಸ್ಸೆಸ್ ಹಾಡಿ ಹೊಗಳಿತ್ತು. ಅಲ್ಲದೆ ಬಿಜೆಪಿ ಕಂಡ ಸಮರ್ಥ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಚಿಂತನೆ, ದೂರದರ್ಶಿತ್ವವನ್ನು ನರೇಂದ್ರ ಮೋದಿ ಅವರಲ್ಲಿ ಕಾಣಲು ಆರೆಸ್ಸೆಸ್ ಮುಂದಾಗಿತ್ತು.
ರಾಷ್ಟ್ರೀಯ ಕಾರ್ಯಕಾರಿಯಿಂದ ಸಂಜಯ್ ಜೋಶಿ ಹೊರ ನಡೆದ ಮೇಲೆ ಮತ್ತೊಂದು ಪ್ರಸಂಗದಲ್ಲಿ ಸಿಲುಕಿದ್ದರು. ಅಹಮದಾಬಾದ್ ಹಾಗೂ ನವದೆಹಲಿಯ ಭಾರತೀಯ ಜನತಾ ಪಾರ್ಟಿಯ ಕಚೇರಿಯ ಮುಂದೆ ಸಂಜಯ್ ಜೋಶಿಯ ಭಾವಚಿತ್ರದ ಇರುವ ದೊಡ್ಡ ಪೋಸ್ಟರ್ ತಲೆ ಎತ್ತಿತ್ತು. ವಿಶೇಷ ಎಂದರೆ ಪೋಸ್ಟರ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕವನವನ್ನು ಬಳಸಿಕೊಳ್ಳಲಾಗಿತ್ತು.
ನಂತರ ನರೇಂದ್ರ ಮೋದಿ ಅವರನ್ನು ಗೇಲಿ ಮಾಡುವ ಹಾಗೂ ಸಂಜಯ್ ಜೋಶಿ ಅವರನ್ನು ಹೊಗಳುವ ಪೋಸ್ಟರ್ ಗಳು ಅಹಮದಾಬಾದ್ ಅಲ್ಲದೆ ಗುಜರಾತ್ ನ ಅನೇಕ ಕಡೆ ಕಾಣಿಸಿಕೊಂಡಿತ್ತು. "Perform Rajdharma, Prajadharma and partydharma" ಎಂಬ ವಾಕ್ಯ ಇದ್ದ ಪೋಸ್ಟರ್ ಗಳು ಸಹಜವಾಗಿ ಮೋದಿ ಅಭಿಮಾನಿಗಳನ್ನು ಕೆರಳಿಸಿತ್ತು. ಆದರೆ, ಸಂಜಯ್ ಜೋಶಿ ಪರ ಪೋಸ್ಟರ್ ಗಳನ್ನು ಯಾರು ಹಾಕಿದರು. ಅವರ ಉದ್ದೇಶ ಏನು ಎಂಬುದು ಬಹಿರಂಗವಾಗಿರಲಿಲ್ಲ.
ಈಗ ನೋಡಿದರೆ, ಸಂಜಯ್ ಜೋಶಿ ಬಿಜೆಪಿ ತೊರೆದಿರುವ ಸುದ್ದಿ ಹೊರಬಿದ್ದಿದೆ. ಆದರೆ, ಬಿಜೆಪಿ ವಕ್ತಾರರು ಈ ವಿಷಯವನ್ನು ಅಧಿಕೃತವಾಗಿ ಇನ್ನೂ ಹೊರಹಾಕಿಲ್ಲ. ಬಿಜೆಪಿ ತೊರೆದ ಮೇಲೆ ಸಂಜಯ್ ಜೋಶಿ ಏನು ಮಾಡಲಿದ್ದಾರೆ ಎಂಬುದು ಕುತೂಹಲದ ಸಂಗತಿಯಾಗಿದೆ.