ನಿತಿನ್ ಗಡ್ಕರಿ ಆಸ್ತಿ ಮೇಲೆ ದಿಗ್ವಿಜಯ್ ಕಣ್ಣು
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆ ನಿತಿನ್ ಗಡ್ಕರಿಆವರಿಗೆ ಇರುವ ಆತ್ಮೀಯ ಸಂಬಂಧ ಎಲ್ಲರಿಗೂ ತಿಳಿದ ವಿಷಯ. ಯಡಿಯೂರಪ್ಪ ಅವರಿಂದ ಗಡ್ಕರಿಗೆ ಭೂ ದಾನ ಕೂಡಾ ಸಿಕ್ಕಿರುವ ದಾಖಲೆಗಳಿದೆ ಎಂದು ದಿಗ್ವಿಜಯ್ ಹೇಳಿದರು.
'ನಾನು ನನ್ನ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಲು ಸಿದ್ಧ. ಯಾವ ರೀತಿ ವಿಚಾರಣೆಯಾದರೂ ಸರಿಯೇ ನಾನು ಸಹಕರಿಸುವೆ. ಅದೇ ರೀತಿ ನಿತಿನ್ ಗಡ್ಕರಿ ಅವರ ಆಸ್ತಿ ತನಿಖೆ ಕೂಡಾ ಆಗಬೇಕಿದೆ' ಎಂದು ದಿಗ್ವಿಜಯ್ ಹೇಳಿದ್ದಾರೆ.
ಮಾಹೇಶ್ವರ್ ನಲ್ಲಿ ಜೂ.12ರಂದು ನಡೆಯಲಿರುವ ಉಪಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದೇವೆಂದ್ರ ಸಾಧೂ ಪರ ಪ್ರಚಾರಕ್ಕೆ ಆಗಮಿಸಿದ್ದ ದಿಗ್ವಿಜಯ್ ಅವರು ನಿತಿನ್ ಗಡ್ಕರಿ ವಿಲಾಸಿ ಕಾರ್ಯಕ್ರಮಗಳ ಬಗ್ಗೆ ಟೀಕಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಗಡ್ಕರಿ ಅವರು ತಮ್ಮ ಮಗನ ಮದುವೆಗೆ ಸುಮಾರು 16 ಕೋಟಿ ರು ಖರ್ಚು ಮಾಡಿ ಮಾಡಿದ ಲೆಕ್ಕ ಸಿಕ್ಕಿದೆ ಸುಮಾರು 2 ಲಕ್ಷ ಜನರಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ.
ಕಪ್ಪು ಹಣದ ಬಗ್ಗೆ ಮಾತನಾಡುವ ಬಾಬಾ ರಾಮದೇವ್ ಹಾಗೂ ಬಿಜೆಪಿ ಮೊದಲು ತಮ್ಮ ದುಂದುವೆಚ್ಚದ ಬಗ್ಗೆ ವಿವರ ನೀಡಲಿ. 80 ಕೋಟಿ ರು ಆದಾಯ ತೆರಿಗೆ, 40 ಕೋಟಿ ಮಾರಾಟ ತೆರಿಗೆ ನೋಟೀಸ್ ಪಡೆದ ಬಾಬಾ ಇನ್ನೂ ಉತ್ತರ ನೀಡಿಲ್ಲ ಏಕೆ? ಗಡ್ಕರಿ ಮಗನ ಮದುವೆ ಲೆಕ್ಕ ಇನ್ನೂ ಸಂಪೂರ್ಣ ಸಿಕ್ಕಿಲ್ಲ. ಸಿಕ್ಕ ಮೇಲೆ ಸೂಕ್ತ ದಾಖಲೆಯೊಂದಿಗೆ ಗಡ್ಕರಿ ಮೇಲೆ ತನಿಖೆಗೆ ಆಗ್ರಹಿಸಲಾಗುವುದು ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಗಡ್ಕರಿಯವರ ಎರಡನೆಯ ಪುತ್ರ ಸಾರಂಗ್ ತನ್ನ classmate ಮಧುರಾ ರೋದಿ ಅವರನ್ನು ಇದೇ 24ರಂದು ಮದುವೆಯಾಗಲಿದ್ದಾರೆ. ಮದುವೆ ಸಂಬಂಧ ಜುಲೈ 2ರಂದು ನವದೆಹಲಿಯ ಅಶೋಕ ಹೋಟೆಲ್ನಲ್ಲಿ ಔತಣ ಕೂಟ ಏರ್ಪಡಿಸಲಾಗಿದೆ.
ಹಿರಿಯ ಪುತ್ರ ನಿಖಿಲ್ ರ ಮದುವೆ ನ ಭೂತೋ ನ ಭವಿಷ್ಯತ್ ಎಂಬಂತೆ ದಾಂಧೂಮ್ ಆಗಿ ನಡೆದಿತ್ತು. ಆಗ ಗಣ್ಯಾತಿಗಣ್ಯ ಅತಿಥಿಗಳನ್ನು ಹೊತ್ತು ಬರೋಬ್ಬರಿ 43 ವಿಮಾನಗಳು ನಾಗಪುರದ ಮೇಲೆ ಹಾರಾಡಿದ್ದವು. ಸುಮಾರು 2 ಲಕ್ಷ ಮಂದಿ ಮದುವೆಗೆ ಆಗಮಿಸಿದ್ದರು.