ಅಖಿಲೇಶ್ ಪತ್ನಿ ಡಿಂಪಲ್ ಗೆ ಗೆಲುವು ಖಚಿತ
ಕನೌಜ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಡಿಂಪಲ್ ಅವರಿಗೆ ಸ್ಥಾನ ಕಲ್ಪಿಸಿರುವುದನ್ನು ಬಹುಜನ ಸಮಾಜವಾದಿ ಪಕ್ಷ ಬಲವಾಗಿ ಖಂಡಿಸಿದೆ. ಕೌಟುಂಬಿಕ ರಾಜಕೀಯಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ಸಮಾಜವಾದಿ ಪಕ್ಷದಲ್ಲಿ ಬೇರೆ ಯಾರೂ ಅಭ್ಯರ್ಥಿಗಳು ಇರಲಿಲ್ಲವೇ? ಎಂದು ಬಿಎಸ್ ಪಿ ವಕ್ತಾರರು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಮುಲಾಯಂ ಸಿಂಗ್ ಯಾದವ್ ಪುತ್ರ ಅಖಿಲೇಶ್ ಯಾದವ್ ಅವರು ಅಧಿಕಾರ ಸ್ವೀಕರಿಸಿದ ಮೇಲೆ ತೆರವಾಗಿರುವ ಕನೌಜ್ ಕ್ಷೇತ್ರಕ್ಕೆ ಇಳಿದಿರುವ ಡಿಂಪಲ್ ಯಾದವ್ ರಾಜಕೀಯವಾಗಿ ಅನನುಭವಿಯಾದರೂ ವಿದ್ಯಾವಂತೆ.
35 ವರ್ಷದ ಡಿಂಪಲ್ ಯಾದವ್ ಎಂಬಿಎ ಪದವೀಧರೆ. ಡಿಂಪಲ್ ವಿರುದ್ಧ ಬಿಎಸ್ ಪಿ, ಬಿಜೆಪಿ ಅಲ್ಲದೆ ಕಾಂಗ್ರೆಸ್ ಕೂಡಾ ಅಭ್ಯರ್ಥಿಯನ್ನು ಹಾಕದಿರಲು ನಿರ್ಧರಿಸಿರುವುದು ಡಿಂಪಲ್ ಅವರು ಅವಿರೋಧ ಆಯ್ಕೆಯಾಗುವ ಸಾಧನೆಗೆ ಮುನ್ನುಡಿ ಬರೆದಿದೆ.
ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಬೆಂಬಲ ಅಗತ್ಯವಿರುವುದರಿಂದ ಉತ್ತರಪ್ರದೇಶ ಉಪ ಚುನಾವಣೆಯಲ್ಲಿ ಎಸ್ಪಿ ಗೆ ಪೈಪೋಟೀ ನೀಡದಿರಲು ಕಾಂಗ್ರೆಸ್ ಹಾಗೂ ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯಿಂದ ಜಗದೇವ್ ಸಿಂಗ್ ಸ್ಪರ್ಧಿಸುವ ಸಾಧ್ಯತೆಯಿದ್ದರೂ ಇನ್ನೂ ಸ್ಪಷ್ಟತೆಯಿಲ್ಲ. 2009ರಲ್ಲಿ ಫಿರೋಜಾಬಾದ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ್ ಬಬ್ಬರ್ ವಿರುದ್ಧ ಡಿಂಪಲ್ ಪರಾಭವಗೊಂಡಿದ್ದರು. ಜೂ.24ರಂದು ಕನೌಜ್ ಉಪಚುನಾವಣೆ ನಡೆಯಲಿದೆ.
ಪಕ್ಷೇತರ ಅಭ್ಯರ್ಥಿಗಳಾದ ದಶರಥ್ ಶಂಖವಾರ್ ಹಾಗೂ ಸಂಜು ಕಟೀಯಾರ್ ಅವರು ನಾಮಪತ್ರ ಹಿಂಪಡೆದರೆ, ಡಿಂಪಲ್ ಅವಿರೋಧವಾಗಿ ಲೋಕಸಭೆಗೆ ಆಯ್ಕೆಯಾಗಿ ನೇರವಾಗಿ ಸಂಸತ್ ಪ್ರವೇಶಿಸುವ ಸಾಧ್ಯತೆಯಿದೆ.
ಈ ನಡುವೆ Peace Party of India ವಕ್ತಾರ ಅಜೀಜ್ ಖಾನ್ ಅವರು ಸಮಾಜವಾದಿ ಪಕ್ಷದ ವಿರುದ್ದ ಹರಿಹಾಯ್ದಿದ್ದು, ಎಸ್ ಪಿ ಗೂಂಡಾಗಳು ರಾತ್ರಿ ವೇಳೆ ಪಕ್ಷದ ಕಚೇರಿ ಮೇಲೆ ದಾಳಿ ಮಾಡಿದರು ಎಂದು ಆರೋಪಿಸಿದ್ದಾರೆ.ಪ್ರಭಾತ್ ಪಾಂಡೆ ಎಂಬ ಇನ್ನೊಬ್ಬ ಅಭ್ಯರ್ಥಿ ಕೂಡಾ ಅನಾಮಿಕ ವ್ಯಕ್ತಿಗಳಿಂದ ಬೆದರಿಕೆ ಬಂದಿರುವುದಾಗಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬಕ್ಕೆ ಕನೌಜ್ ಹಾಗೂ ಫಿರೋಜಾಬಾದ್ ಉಳಿಸಿಕೊಡುವಲ್ಲಿ ಸೊಸೆ ಡಿಂಪಲ್ ಬಹುತೇಕ ಯಶಸ್ವಿಯಾಗುವ ಲಕ್ಷಣಗಳು ಕಾಣಿಸಿದೆ.