ಚುನಾವಣೆ ನಂತರ ಪೆಟ್ರೋಲ್ ಬೆಲೆ ಇಳಿಕೆ
ಹೆಚ್ಚಾಗಿರುವ ಪೆಟ್ರೋಲ್ ದರವನ್ನು ರಾಜ್ಯದಲ್ಲಿ ಕಡಿಮೆಗೊಳಿಸಲು ಮಾರಾಟ ತೆರಿಗೆ(ಸೆಸ್) ಇಳಿಸುವ ಕುರಿತು ವಿಧಾನ ಪರಿಷತ್ತಿನ ಚುನಾವಣೆಯ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸೋಮವಾರ (ಜೂ.4) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ದರವನ್ನು ಹೆಚ್ಚಿಸಿದ ಕಾರಣದಿಂದ ರಾಜ್ಯದಲ್ಲಿ ಅನಿವಾರ್ಯವಾಗಿ ದರ ಏರಿಸಬೇಕಾಯಿತು ಎಂದರು.
ರಾಜ್ಯದಲ್ಲಿ ಏರಿಕೆಯಾಗಿರುವ ದರವನ್ನು ಇಳಿಸುವಂತೆ ಹಲವು ರೀತಿಯಲ್ಲಿ ಜನ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಷತ್ ಚುನಾವಣೆಯ ಬಳಿಕ ಸೆಸ್ ಇಳಿಕೆಯ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಸರ್ಕಾರದ ಮೇಲೆ ಕಿಡಿ: ಬರಪೀಡಿತ ರಾಜ್ಯಕ್ಕೆ ನೆರವು ಒದಗಿಸುವಲ್ಲಿ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಸಿಎಂ ಕಿಡಿಕಾರಿದರು.
ಬರದಿಂದ ರಾಜ್ಯದಲ್ಲಿ ಒಟ್ಟು 6 ಸಾವಿರ ಕೋಟಿ ರೂ.ಗೂ ಅಧಿಕ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬರವನ್ನು ಎದುರಿಸಲು ಕೇಂದ್ರ ಸರ್ಕಾರ ತುರ್ತಾಗಿ ಒಂದು ಸಾವಿರ ಕೋಟಿ ರೂ. ಆದರೂ ನೀಡಬೇಕಿತ್ತು. ಆದರೆ 238 ಕೋಟಿಯಷ್ಟೇ ನೀಡಲಾಗಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.
ಪರಿಷತ್ ಚುನಾವಣೆಯ ಬಳಿಕ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಲಾಗುವುದು ಎಂದವರು ಇದೇ ವೇಳೆ ತಿಳಿಸಿದರು.
ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಟ್ಟಿಟ್ಟಬುತ್ತಿ ಎಂದ ಸದಾನಂದ ಗೌಡ, ಕೆಲವೇ ತಿಂಗಳಲ್ಲಿ ಚುನಾವಣೆ ಬರಲಿದೆ ಎಂಬ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ಈಶ್ವರಪ್ಪ ನೀಡುತ್ತಿರುವ ಹೇಳಿಕೆ ಅವರ ವೈಯಕ್ತಿಕ. ಅದರ ಬಗ್ಗೆ ತಾನು ಮಾತನಾಡಲ್ಲ ಎಂದರು.