ಕರ್ನಾಟಕದಲ್ಲಿ ಮುಂಗಾರುಮಳೆಯ ಹನಿಗಳ ಲೀಲೆ ಆರಂಭ
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮಂಗಳವಾರ 'ವಿಶ್ವ ಪರಿಸರ ದಿನಾಚರಣೆ' ದಿನ ಆರಂಭವಾಗಿರುವ ಮುಂಗಾರಿನ ವರ್ಷಧಾರೆ ಇಡೀ ಕೇರಳವನ್ನು ಆವರಿಸಿಕೊಂಡಿದ್ದು, ಕರ್ನಾಟಕದ ಕರಾವಳಿ, ಗೋವಾ, ತಮಿಳುನಾಡಿನ ದಕ್ಷಿಣ ಪ್ರಾಂತ್ಯ, ಬಂಗಾಳ ಕೊಲ್ಲಿಯ ಪೂರ್ವ ಭಾಗ, ಮಾಲ್ಡೀವ್ಸ್ ದ್ವೀಪಗಳಲ್ಲಿ ಸುರಿಯುತ್ತಿದ್ದು, ಮುಂಗಾರು ಮಳೆ ಕರುನಾಡಿನ ರೈತ ಬಾಂಧವರಲ್ಲಿ ಹರ್ಷದ ಹೊನಲು ಹರಿಸಿದೆ. ಈ ವರ್ಷ ಮುಂಗಾರು ಜೂನ್ 1ರಂದು ಆಗಮಿಸಬೇಕಿತ್ತು. ಮುಂಗಾರು ಈ ಬಾರಿ ನಾಲ್ಕು ದಿನ ತಡವಾಗಿ ಬಂದರೂ, ಮಳೆ ಕೊರತೆ ಕಾಣುವ ಲಕ್ಷಣಗಳಿಲ್ಲ ಎಂದು ಆಶಾವಾದವನ್ನು ಇಲಾಖೆಯ ತಜ್ಞರು ವ್ಯಕ್ತಪಡಿಸಿದ್ದಾರೆ.
ಹವಾಮಾನ ಇಲಾಖೆ ಎಚ್ಚರಿಕೆ : ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ, ಪಶ್ಚಿಮ ಘಟ್ಟಗಳಲ್ಲಿ ಮತ್ತು ನಾಡಿನ ಕೆಲ ಒಳ ಪ್ರದೇಶಗಳಲ್ಲಿ ಸಾಧಾರಣ ಮತ್ತು ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆಯ ಇನ್-ಚಾರ್ಜ್ ನಿರ್ದೇಶಕ ಬಿ. ಪುಟ್ಟಣ್ಣ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾಜ್ಯದ ಕರಾವಳಿಗುಂಟ ಮುಂದಿನ 24 ಗಂಟೆಗಳಲ್ಲಿ 50ರಿಂದ 60 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯುವ ಸಾಹಸ ಮಾಡಬಾರದು ಪುಟ್ಟಣ್ಣ ಎಚ್ಚರಿಕೆ ನೀಡಿದ್ದಾರೆ.
ಮಳೆಯ ಪ್ರಮಾಣ : ಪಣಂಬೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಕಾರವಾರದಲ್ಲಿ 6 ಸೆಂ.ಮೀ., ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬೆಳ್ತಂಗಡಿ, ಉತ್ತರ ಕನ್ನಡ ಜಿಲ್ಲೆಯ ನಿಲಕುಂದ್, ಬಾಗಲಕೋಟೆ ಜಿಲ್ಲೆಯ ಕಲಡಗಿಯಲ್ಲಿ 5 ಸೆಂ.ಮೀ., ಉಡುಪಿ ಜಿಲ್ಲೆಯ ಕೋಟ, ಕಾರ್ಕಳ, ಕೊಲ್ಲೂರು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಮಂಕಿ, ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 4 ಸೆಂ.ಮೀ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಬಂಟ್ವಾಳ, ಮಣಿ, ಧರ್ಮಸ್ಥಳದಲ್ಲಿ 3 ಸೆಂ.ಮೀ. ಮಳೆಯಾಗಿದೆ.
ಗರಿಷ್ಠ ತಾಪಮಾನ : ಬಾಗಲಕೋಟೆ, ಗದಗ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ, ಬಿಜಾಪುರ, ಧಾರವಾಡ, ಗುಲಬರ್ಗ, ಯಾದಗಿರಿ, ಹಾಸನ, ಮೈಸೂರು, ಕೋಲಾರ ಜಿಲ್ಲೆಗಳಲ್ಲಿಯೂ ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆ ಬಿದ್ದಿದೆ. ಮುಂದಿನ 48 ಗಂಟೆಗಳಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದರೆ, ಬೀದರ ಜಿಲ್ಲೆ ಮಾತ್ರ ನಿಗಿನಿಗಿ ಕುದಿಯುತ್ತಿದೆ. ರಾಜ್ಯದ ಗರಿಷ್ಠ ತಾಪಮಾನ ಬೀದರದಲ್ಲಿ 41.1 ಡಿಗ್ರಿ ಸೆಲ್ಶಿಯಸ್ನಷ್ಟು ದಾಖಲಾಗಿದೆ.