ವಿಶ್ವನಾಥನ್ ಆನಂದಗೆ ಭಾರತ ರತ್ನ ಕೊಡಿ: ಜಯಾ
'ನೀವು ತಮಿಳುನಾಡಿಗೆ ಅಪಾರ ಕೀರ್ತಿ ತಂದಿದ್ದೀರಿ. ನಿಮ್ಮ ಈ ಅಮೋಘ ಸಾಧನೆಗಾಗಿ ಅಭಿನಂನೆಗಳು. ಇನ್ನೂ ಅನೇಕ ವರ್ಷ ಕಾಲ ನಿಮ್ಮ ಮುಕುಟದಲ್ಲಿ ಈ ವಿಶ್ವಪಟ್ಟ ರಾರಾಜಿಸುತ್ತಿರುಬೇಕು ಎಂಬುದು ನಮ್ಮೆಲ್ಲರ ಆಸೆ' ಎಂದು ವಿಶ್ವನಾಥನ್ ಆನಂದ್ ಅವರಿಗೆ ಬರೆದ ಪತ್ರದಲ್ಲಿ ಜಯಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಗಮನಾರ್ಹವೆಂದರೆ ಜಯಾ ರಾಜ್ಯದ ಶಾಲೆಗಳಲ್ಲಿ ಚೆಸ್ ಕ್ರೀಡೆಯನ್ನು ಅಳವಡಿಸಲು ನಿರ್ಧರಿಸಿದ್ದಾರೆ. ವಿಶಿ ಸಾಧನೆಯನ್ನು ಮೆಚ್ಚಿ ಅವರು 2 ಕೋಟಿ ರುಪಾಯಿ ನಗದು ಬಹುಮಾನವನ್ನೂ ಘೋಷಿಸಿದ್ದಾರೆ. ಇದೇ ವೇಳೆ, ರಾಜ್ಯ ಸರಕಾರ ವಿಶಿಗೆ ಪೌರ ಸನ್ಮಾನವನ್ನೂ ಆಯೋಜಿಸಿದೆ.
ಅತ್ಯುತ್ಕೃಷ್ಟ ನಾಗರಿಕ ಸಮ್ಮಾನವಾದ ಭಾರತ ರತ್ನವನ್ನು ಕ್ರೀಡಾಪಡುವಿಗೂ ನೀಡಬೇಕು ಎಂಬ ಕೂಗು ಇತ್ತೀಚಿನ ದಿನಗಳಲ್ಲಿ ಎದ್ದಿದೆ. ಆದರೆ ಆ ಮೊದಲ ಗೌರವ ಯಾರಿಗೆ ಸಲ್ಲಬೇಕು ಎಂಬುದುರ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಇಡೀ ವಿಶ್ವದಲ್ಲಿ ಚದುರಂಗ ಪತಾಕೆಯನ್ನು ಹಾರಿಸಿರುವ ವಿಶ್ವನಾಥನ್ ಆನಂದ್ ಆ ಗೌರವಕ್ಕೆ ಅತ್ಯಂತ ಅರ್ಹ ವ್ಯಕ್ತಿ ಎಂದು ಜಯಾ ಹೇಳಿದ್ದಾರೆ.
ಹೌದು ವಿಶ್ವನಾಥನ್ ಆನಂದ್ ಭಾರತ ರತ್ನ ಸಮ್ಮಾನಕ್ಕೆ ನಿಜಕ್ಕೂ ಅರ್ಹರು. ಜಯಲಲಿತಾ ತಮ್ಮ ರಾಜ್ಯದ ಕ್ರೀಡಾಪಟುವಿನ ಬಗ್ಗೆ ಹೇಳಿದ್ದಾರೆ ಎನ್ನುವುದಕ್ಕಿಂತ ಹೆಚ್ಚಿಗೆ ಒಬ್ಬ ಅತ್ಯುತ್ತಮ ಮಾದರಿ ವ್ಯಕ್ತಿಯ ಬಗ್ಗೆ ಹೇಳಿರುವುದು ಸ್ವಾಗತಾರ್ಹ. ಈಗೀಗ youth iconಗಳೆ ಇಲ್ಲ ಎನ್ನುತ್ತಿರುವಾಗ ವಿಶಿ ಎದ್ದು ಕಾಣುತ್ತಾರೆ.
ಇಲ್ಲಿ ವಿಶಿ ಅವರ ಹೆಸರನ್ನು ಭಾರತ ರತ್ನಕ್ಕೆ ಪ್ರಸ್ತಾಪಿಸುವಾಗ ನಮ್ಮ ಸಚಿನ್ ತೆಂಡೂಲ್ಕರ್ ಅರ್ಹರಲ್ಲವೋ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದು ಸಹಜವೂ ಹೌದು. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಮೈದಾನದ ನಟ್ಟನಡುವೆ ಕಾಣಿಸಿಕೊಳ್ಳುವ ಒಂದು ತೆರೆದ ಪುಸ್ತಕ. ಅದೇ ವಿಶ್ವನಾಥನ್ ಆನಂದ್ ಮುಚ್ಚಿದ ಪುಸ್ತಕ. ಆದರೆ ಆ ಮುಚ್ಚಿದ ಪುಸ್ತಕದಲ್ಲೇ ಅಡಗಿದೆ ಬ್ರಹ್ಮಾಂಡ.
ವ್ಯಕ್ತಿತ್ವ ವಿಕಸನ, ವಿಶ್ವವವನ್ನು ಗೆಲ್ಲುವುದು ಹೇಗೆ, ನಾಯಕರಾಗುವುದು ಎಂದು ಪಡಪೋಶಿಗಳು ನೋರೆಂಟು ಪುಸ್ತಕ ಬರೆಯುವುದಕ್ಕಿಂತ ಈ ಒಬ್ಬ ಮೌನ ಮುನಿ, ಏಕಾಂಗಿ ತಪಸ್ವಿ ಅಂತಹ ಒಂದು ಪುಸ್ತಕ ಬರೆದರೆ ಅದು ನೂರಾರು ವಿಶಿಗಳ ವಿಕಸನಕ್ಕೆ ನಾಂದಿಯಾದೀತು ಎಂಬುದರಲ್ಲಿ ಎರಡು ಮಾತಿಲ್ಲ.
ವಿಶಿಯೇ ಹೇಳುವಂತೆ ಆಟಕ್ಕೆ ಕುಳಿತಾಗ ಎದುರಾಳಿಯ ಸಣ್ಣ ಕದಲಿಕೆ, ಕನವರಿಕೆಯೂ ದಿಕ್ಕುತಪ್ಪಿಸಬಲ್ಲದು. ಆದ್ದರಿಂದ ವಿಶಿ ಆಡುತ್ತಾ ಎದುರಾಳಿಗೆ ಒಂದು ಸಣ್ಣ ಸುಳಿವನ್ನೂ ನೀಡಬಾರದೆಂದು wood faced ಆಗಿ ಗಂಭೀರ ವದನದಿಂದ ತಮ್ಮ ಕಾಯಿ ನಡೆಸುತ್ತಾರೆ. ಆ ಮಹಾಮೌನದಲ್ಲೇ ಎಲ್ಲವೂ ಅಡಗಿದೆ. success, leadership ಬಗ್ಗೆ ವಿಶ್ವನಾಥನ್ ಆನಂದ್ ಒಂದು ಪುಸ್ತಕ ಬರೆದರೆ...
ಆದ್ದರಿಂದ ವಿಶಿ ಖಂಡಿತ brainyಗಳಿಗೆ ಒಬ್ಬ ಅರ್ಹ role model ಆಗುತ್ತಾರೆ. ಅದಕ್ಕಾಗಿಯೇ ಸೆಲ್ವಿ ಜಯಲಲಿತಾ ವಿಶಿ ಪರ ಬ್ಯಾಟಿಂಗ್ ಮಾಡಿರುವುದು. ವಿಶಿಗೆ ಭಾರತ ರತ್ನ ಸಿಗುತ್ತದೋ, ಬಿಡುತ್ತದೋ ಅದು ಬೇರೆ ಮಾತು. ಆದರೆ ವಿಶೀಗೆ ಭಾರತ ರತ್ನ ನೀಡಬೇಕೋ, ಬೇಡವೋ ಎಂಬುದರ ಬಗ್ಗೆ ನೀವೇನನ್ನುತ್ತೀರಿ, ತಿಳಿಸಿ.