ಪೇದೆ ಸುಜಾತಾ ಆತ್ಯಹತ್ಯೆ ಹಿಂದೆ ಇನ್ಸ್ ಪೆಕ್ಟರ್?
ಸುಜಾತಾ ಜೊತೆ ಮೈಸೂರಿನಲ್ಲೇ ಕೆಲಸ ಮಾಡುತ್ತಿದ್ದ ಇನ್ಸ್ ಪೆಕ್ಟರ್ ಬೆಂಗಳೂರಿಗೆ ವರ್ಗವಾಗಿದ ನಂತರವೂ ಸುಜಾತ ಜೊತೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಇಬ್ಬರ ನಡುವೆ ಗಂಟೆಗಟ್ಟಲೇ ಮಾತುಕತೆ ನಡೆದಿದೆ ಎಂದು ಸುಜಾತಾಳ ಫೋನ್ ಹೇಳುತ್ತಿದೆ.
ಆದರೆ, ಇಬ್ಬರ ನಡುವೆ ಬರೀ ಸ್ನೇಹವಿತ್ತೇ ಅಥವಾ ಸ್ನೇಹಕ್ಕೂ ಮೀರಿದ ಆಪ್ತತೆ ಇತ್ತೇ? ತಿಳಿದು ಬಂದಿಲ್ಲ. ಸಾವಿಗೂ ಮುನ್ನ ಸುಜಾತಾ ಹೆಚ್ಚು ಕಾಲ ಯಾರೊಂದಿಗೋ ಮಾತನಾಡುತ್ತಿದ್ದಳು ಎಂದು ಆಕೆ ತಂದೆ ಕೂಡಾ ಹೇಳಿದ್ದಾರೆ. ಸುಜಾತಾಳ ಕೊನೆ ಕರೆ ಇನ್ಸ್ ಪೆಕ್ಟರ್ ಗೆ ಹೋಗಿತ್ತು ಎಂಬುದು ಕೂಡಾ ಸ್ಪಷ್ಟವಾಗಿದೆ.
ಮೈಸೂರು ನಗರ ಪೊಲೀಸರು UDR(unnatural death) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸುಜಾತಾ ತನ್ನ ಪತಿ ಲಿಂಗದೇವರು ಜೊತೆ ಜಗಳವಾಡಿಕೊಂಡು ಆತನ ಮನೆ ಬಿಟ್ಟು ತವರಿಗೆ ಬಂದಿದ್ದಳು.
ಈ ನಡುವೆ ಮೈಸೂರಿನಲ್ಲಿ ಪರಿಚಯವಾಗಿದ್ದ ಇನ್ಸ್ ಪೆಕ್ಟರ್ ಆಕೆಯೊಂದಿಗೆ ಸಲುಗೆಯಿಂದ ಇರತೊಡಗಿದ್ದ. ಗಂಡನನ್ನು ತೊರೆದ ಮೇಲೆ ಕೆಲ ಕಾಲ ಸುಜಾತಾ ತವರಿನಲ್ಲಿ ತನ್ನ ಪಾಡಿಗೆ ತಾನಿದ್ದಳು. ಆದರೆ, ಇನ್ಸ್ ಪೆಕ್ಟರ್ ಆಕೆಗೆ ಮೆಸೇಜ್ ಮಾಡಿ, ಯಾಕೆ ನನ್ನ ಮರೆತು ಬಿಟ್ಟಿಯಾ. ನೀ ಇಲ್ಲದಿದ್ದರೆ ನಾನು ಸತ್ತು ಬಿಡುತ್ತೇನೆ ಎಂದೆಲ್ಲ ಪ್ರಲಾಪಿಸಿದ್ದ. ಈ ಎಸ್ ಎಂಎಸ್ ಕೂಡಾ ಈಗ ತನಿಖಾಧಿಕಾರಿಗಳ ಕೈಗೆ ಸಿಕ್ಕಿದೆ.
ಸಿಆರ್ ಪಿಸಿ ಸೆಕ್ಷನ್ 174ರ ಅಡಿಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆದಿರುವುದರಿಂದ ಈ ಸಮಯಕ್ಕೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ಇನ್ಸ್ ಪೆಕ್ಟರ್ ಜೊತೆ ಆಕೆಗೆ ಗೆಳೆತನವಿತ್ತು ಎಂಬುದು ನಿಜ. ಆದರೆ, ಆಕೆ ಸಾವಿಗೂ ಗೆಳೆತನಕ್ಕೂ ಏನು ಸಂಬಂಧ ಎಂಬುದು ಸ್ಪಷ್ಟವಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕೆಎಲ್ ಸುಧೀರ್ ಹೇಳಿದ್ದಾರೆ.
ಸಾವಿಗೆ ಜಾರುವ ದಿನ, ಕೆಲಸ ಮುಗಿಸಿ ಹೊರಬಂದ ಮೇಲೆ ಮಧ್ಯರಾತ್ರಿ ತನಕ ಫೋನ್ ನಲಿ ಮಾತನಾಡಿದ್ದಾಳೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ಸ್ ಪೆಕ್ಟರ್ ಹೆಸರು, ವಿವರಗಳನ್ನು ಇನ್ನೂ ತನಿಖಾಧಿಕಾರಿಗಳು ಬಹಿರಂಗಪಡಿಸಿಲ್ಲ.