ಬೇಲ್ ಗಾಗಿ ಲಂಚ ಡೀಲ್ ಕುದುರಿಸಿದ್ದ ಪ್ರತಾಪ
ಜಡ್ಜ್ ಟಿ ಪಟ್ಟಾಭಿರಾಮರಾವ್ ಅವರು ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ನೀಡುವಂತೆ ಡೀಲ್ ಕುದುರಿಸಿದ್ದೆ ಎರಡು ಪ್ರತಾಪ್ ರೆಡ್ಡಿ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
'ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ. ಗಾಲಿ ರೆಡ್ಡಿ ನನಗೆ ಸಂಬಂಧಿಕರು ಎನ್ನುವುದು ನಿಜ. ಆದರೆ, ಅವರ ಜಾಮೀನಿಗಾಗಿ ನಾನು ಯಾವುದೇ ಡೀಲ್ ಮಾಡಿಲ್ಲ. ನಮ್ಮ ಕುಟುಂಬ ಕಳೆದ 50 ವರ್ಷದಿಂದ ರಾಜಕೀಯ ಕ್ಷೇತ್ರದಲ್ಲಿದೆ ಯಾವತ್ತೂ ಭ್ರಷ್ಟಾಚಾರ ಮಾಡಿಲ್ಲ' ಎಂದು ಪ್ರತಾಪ್ ಹೇಳಿದ್ದಾರೆ.
ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಅವರಿಗೆ ಕೋಟ್ಯಂತರ ರೂಪಾಯಿ ಲಂಚ ಪಡೆದು ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಗಣಿ ಅಕ್ರಮ ಪ್ರಕರಣದಲ್ಲಿ ಜಾಮೀನು ನೀಡಿರುವ ಹಗರಣ ಹೊಸ ತಿರುವು ಪಡೆದಿದೆ.
ಕರ್ನೂಲು ಜಿಲ್ಲೆಯವರಾದ ಕಾನೂನು ಸಚಿವ ಎರಸು ಪ್ರತಾಪ್ ರೆಡ್ಡಿ ಅವರು ಜನಾರ್ದನ ರೆಡ್ಡಿಯವರ ಸಂಬಂಧಿಯಾಗಿದ್ದಾರೆ. ಜೈಲಿನಲ್ಲಿರುವ ಜನಾರ್ದನ ರೆಡ್ಡಿಗೆ ಜಾಮೀನು ಒದಗಿಸುವ ಬಹುಕೋಟಿ ರೂಪಾಯಿ ವ್ಯವಹಾರದಲ್ಲಿ ಅವರ ಮತ್ತು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಅವರ ನಡುವೆ ಎರಸು ಮಧ್ಯವರ್ತಿಯಾಗಿ ವ್ಯವಹರಿಸಿದ್ದರು ಎಂಬ ಆರೋಪ ಎದುರಾಗಿದೆ.
ಎರಡು ದಿನಗಳ ಹಿಂದೆ ಈ ಜಾಮೀನು ಹಗರಣವನ್ನು ಸಿಬಿಐ ಬಯಲಿಗೆಳೆದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಸಿಬಿಐಯ ಪ್ರಥಮ ಹೆಚ್ಚುವರಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಟ್ಟಾಭಿರಾಮ ರಾವ್ರನ್ನು ಅಮಾನತುಗೊಳಿಸಿತ್ತು.
ಪಟ್ಟಾಭಿರಾಮ ರಾವ್, ಮಾಜಿ ನ್ಯಾಯಾಧೀಶ ಟಿ. ವಿ. ಚಲಪತಿ ರಾವ್ ಮತ್ತು ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುವ ಸಾಧ್ಯತೆಯಿದೆ. ನ್ಯಾಯಾಧೀಶರ ಬಂಧನಕ್ಕೂ ಸಿಬಿಐ ಸಿದ್ಧತೆ ನಡೆಸಿದೆ. ಈ ಹಗರಣದಲ್ಲಿ ಪಾಲ್ಗೊಂಡವರ ಬಗ್ಗೆ ಸಮಗ್ರ ವಿವರಗಳನ್ನು ಸಿಬಿಐ ಕಲೆಹಾಕತೊಡಗಿದ್ದು, ಸರಿಯಾದ ಸಾಕ್ಷಿ ಆಧಾರದೊಡನೆ ಹೈಕೋರ್ಟ್ಗೆ ವರದಿ ಸಲ್ಲಿಸಲಿದೆ. ಹೈಕೋರ್ಟ್ನ ನಿರ್ದೇಶನದಂತೆ ಈ ಹಗರಣದ ತನಿಖೆಯನ್ನು ಸಿಬಿಐ ಮುಂದುವರಿಸಿದೆ.
ಓಬಳಾಪುರಂ ಗಣಿ ಸಂಸ್ಥೆ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಎಂಡಿ ಶ್ರೀನಿವಾಸ್ ಅವರಿಗೆ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯ ಕಳೆದ ಮೇ 11 ರಂದು ಜಾಮೀನು ಮಂಜೂರು ಮಾಡಿತ್ತು. ಗಮನಾರ್ಹವೆಂದರೆ ಮತ್ತೊಂದು ಗಣಿ ಅಕ್ರಮ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಗಾಲಿ ರೆಡ್ಡಿಗೆ ಬಿಡುಗಡೆ ಭಾಗ್ಯ ಒದಗಿ ಬಂದಿರಲಿಲ್ಲ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಬೇಲ್ ನೀಡಿದ್ದ ನಾಂಪಲ್ಲಿ ಸಿಬಿಐ ನ್ಯಾಯಾಧೀಶ ರಾಮರಾವ್ ಅವರು 5 ಲಕ್ಷ ರೂಪಾಯಿ ಶ್ಯೂರಿಟಿ ಸಲ್ಲಿಸುವಂತೆ ಆದೇಶಿಸಿದ್ದರು. ಜತೆಗೆ, ದೇಶಬಿಟ್ಟು ಹೊರಗೆ ಹೋಗಬಾರದು ಎಂದೂ ಆದೇಶ ನೀಡಿದ್ದರು.