ಲಕ್ಷಾಂತರ ಒಕ್ಕಲಿಗರ 'ವಿರಾಟ್' ಶಕ್ತಿ ಪ್ರದರ್ಶನ

ಒಕ್ಕಲಿಗರ ಸಮಾವೇಶಕ್ಕೆ ಆಗಮಿಸಿದ್ದ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿಗೆ ಸಾರಿಗೆ, ಊಟ, ವಸತಿ ವ್ಯವಸ್ಥೆ ಮಾಡಿದ ಕಾರ್ಮಿಕ ಸಚಿವ ಬಿಎನ್ ಬಚ್ಚೇಗೌಡರ ಕುಟುಂಬವನ್ನು ಎಲ್ಲರೂ ಹೃತ್ಪೂರ್ವಕವಾಗಿ ಹರಸಿದರು.
ಸಾರಿಗೆ ವ್ಯವಸ್ಥೆ ಉಸ್ತುವಾರಿ ವಹಿಸಿಕೊಂಡಿದ್ದ ಗೃಹ ಹಾಗೂ ಸಾರಿಗೆ ಸಚಿವ ಆರ್ ಅಶೋಕ್ ಅವರು ದೂರದ ಊರುಗಳಿಂದ ಬಂದ ಒಕ್ಕಲಿಗ ಸಮಾಜದವರಿಗೆ ಕಲ್ಯಾಣಮಂಟಪಗಳು ಹಾಗೂ ಒಕ್ಕಲಿಗರ ಸಂಘಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಆದರೂ ಹರಿದು ಬರುತ್ತಿದ್ದ ಜನಸಾಗರವನ್ನು ತಡೆಯಲು ಸಾಧ್ಯವಾಗದೆ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆ ನಂತರ ಶುರುವಾಯಿತು.
ಗಣ್ಯರ ದಂಡು: ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಗುರುಗುಂಡೇಶ್ವರ ಮಹಾ ಸಂಸ್ಥಾನ ಮಠದ ನಂಜಾವಧೂತ ಮಹಾಸ್ವಾಮೀಜಿ ಸೇರಿದಂತೆ ಹಲವು ಹರಗುರು ಚರಮೂರ್ತಿಗಳು, ಕೇಂದ್ರ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ, ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ
ಮಾಜಿ ಕೇಂದ್ರ ಸಚಿವ, ನಟ ಅಂಬರೀಶ್, ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಟಿಬಿ ಜಯಚಂದ್ರ, ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ, ಸಚಿವ ಬಿಎನ್ ಬಚ್ಚೇಗೌಡ, ಶಾಸಕ ಎಂ ಕೃಷ್ಣಪ್ಪ, ಅಶ್ವಥ ನಾರಾಯಣ, ಜಗ್ಗೇಶ್, ಎಂ ಶ್ರೀನಿವಾಸ್, ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಸಿಪಿ ಯೋಗೇಶ್ವರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ಹಲವಾರು ಗಣ್ಯರು ಭಾಗವಹಿಸಿದ್ದರು.
ಸದಾನಂದ ಗೌಡರ ಭಾಷಣ: ನಾನು ಸಿಎಂ ಆಗಲು ಒಕ್ಕಲಿಗ ಸಮುದಾಯವೇ ಕಾರಣ. ನನ್ನ ಸಮುದಾಯದ ಋಣ ನನ್ನ ಮೇಲಿದೆ. ಒಕ್ಕಲಿಗ ಸಮುದಾಯದ ಕೆಳಹಂತದಲ್ಲಿರುವ ಉಪ ಪಂಗಡಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದು ನಮ್ಮಕರ್ತವ್ಯವಾಗಿದೆ ಎಂದರು.
ಕುಮಾರಸ್ವಾಮಿ: ನನ್ನ ತಂದೆ ದೇವೇಗೌಡರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ದಯವಿಟ್ಟು ಒಕ್ಕಲಿಗ ಸಮುದಾಯ ಕ್ಷಮಿಸಬೇಕು. 20 ವರ್ಷಗಳ ನಂತರ ಈ ಪಾಟಿ ಜನ ನೋಡಿ ನನ್ನ ಮನಸ್ಸು ಹರ್ಷಗೊಂಡಿದೆ. ಒಕ್ಕಲಿಗ ಸಮುದಾಯ ಪ್ರಾಬಲ್ಯವಿರುವ ಜಿಲ್ಲೆಗಳು ಈಗ ಬರದಿಂದ ತತ್ತರಿಸುತ್ತಿದೆ. ಐದು ಜಿಲ್ಲೆಗಳಿಗೆ ನೀರು ಹರಿಸಲು ವೀರೇಂದ್ರ ಹೆಗ್ಗಡೆ ಅವರೊಂದಿಗೆ ಕೂಡಾ ಚರ್ಚಿಸಿದ್ದೇನೆ. ಸಿಎಂ ಸದಾನಂದ ಗೌಡರು ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಅಭಿನಂದನೆ: ಕೇಂದ್ರ ಸಚಿವ ಎಸ್ ಎಂ ಕೃಷ್ಣ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಚಿತ್ರನಟ ಅಂಬರೀಶ್, ಹಿರಿಯ ಸಾಹಿತಿ ದೇ ಜವರೇಗೌಡ ಸೇರಿದಂತೆ ಹಲವು ಒಕ್ಕಲಿಗ ಮುಖಂಡರಿಗೆ ಆತ್ಮೀಯವಾಗಿ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಬಾಲಗಂಗಾಧರನಾಥ ಸ್ವಾಮೀಜಿ ಅವರು ದೇಶ, ವಿದೇಶಗಳಲಿ ನೀಡಿದ ಉಪನ್ಯಾಸಗಳ ಸಂಗ್ರಹಿತ ಕೃತಿಗಳಾದ 'ಧರ್ಮ ಜ್ಯೋತಿ' ಮತ್ತು ಆದಿಚುಂಚನಗಿರಿ ಮಠದ ಇತಿಹಾಸ ಸಾರುವ 'ಭೈರವ ಇದ್ದಾನೆ' ಎಂಬ ಎರಡು ಕೃತಿಗಳನ್ನು ಆರ್ ಅಶೋಕ್ ಲೋಕಾರ್ಪಣೆ ಮಾಡಿದರು.
ಗಲಭೆ, ಗೊಂದಲ: ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸ್ಥಳಾವಕಾಶ ಸಿಗದೆ ತೊಂದರೆ ಅನುಭವಿಸಿದ ಜನರು ಸಿಟ್ಟಿಗೆದ್ದು ಕೆಲ ಕಾಲ ಗಲಾಟೆ ಮಾಡಿದರು. ಆದರೆ, ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಅಂಬರೀಶ್ ಅವರ ಮನವಿಗೆ ಬೆಲೆ ಕೊಟ್ಟ ಮಂದಿ ಶಾಂತವಾಗಿ, ಸಮಾವೇಶ ಮುಂದುವರೆಯುವಂತೆ ಮಾಡಿದರು.
ಕಾಂಗ್ರೆಸ್, ಜೆಡಿಎಸ್ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಶಾಸಕರು, ಮುಖಂಡರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಎಚ್ ಡಿ ದೇವೇಗೌಡ ಹಾಗೂ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಆದರೆ, ಒಕ್ಕಲಿಗ ಸಮಾಜದ ಒಗ್ಗಟ್ಟು ಎದ್ದು ಕಾಣುತ್ತಿತ್ತು. ದಾವಣಗೆರೆಯಲ್ಲಿ ಕುರುಬ ಸಮಾಜದ ಬೃಹತ್ ಸಮಾವೇಶದ ನಂತರ ಒಕ್ಕಲಿಗ ಸಮುದಾಯದ ವಿರಾಟ್ ಶಕ್ತಿ ಪ್ರದರ್ಶನ ಯಶಸ್ವಿಯಾಗಿದೆ. ಆದರೆ, ಬೆಂಗಳೂರಿನ ಆ ಭಾಗದ ನಾಗರೀಕರಿಗೆ ಟ್ರಾಫಿಕ್ ಕಿರಿಕಿರಿ ಈ ವಾರವೂ ಮುಂದುವರೆದಿದೆ.












Click it and Unblock the Notifications