ಸುಪ್ರೀಂನಲ್ಲಿ ಶಂಕರ್ ಬಿದರಿಗೆ ಮೊದಲ ಜಯ

ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ಹಾಲಿ ಡಿಜಿ ಐಜಿಪಿ ಶಂಕರ್ ಬಿದರಿ ಅವರ ನೇಮಕಾತಿಯನ್ನು ರದ್ದುಗೊಳಿಸಿದ್ದು ಹೈಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಆದರೆ, ಶುಕ್ರವಾರ(ಜೂ.1) ಹೈ ಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಸಿಎಟಿ ವರದಿಯನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್, ಶಂಕರ್ ಬಿದರಿಯನ್ನು ನರರೂಪದ ರಕ್ಕಸ, ಸದ್ದಾಂ ಹುಸೇನ್, ಮುಹಮ್ಮರ್ ಗಡಾಫಿಗಿಂತ ಭೀಕರ ವ್ಯಕ್ತಿ ಎಂದು ವರದಿ ಆಧಾರದ ಮೇಲೆ ಕೋರ್ಟ್ ಹೇಳಿತ್ತು.
STF ಮುಖ್ಯಸ್ಥರಾಗಿದ್ದ ಬಿದರಿ ಅವರು ವಿಧವೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈರಮ್ಮ ಎಂಬುವವರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಪೈಶಾಚಿಕವಾಗಿ ವರ್ತಿಸಿದ ಎಸ್ ಟಿಎಫ್ ಪಡೆ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದೆ ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡುಂತೆ ಹೈಕೋರ್ಟ್ ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ ಬಿದರಿ ಅವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿ, ಮಾನವ ಹಕ್ಕು ಉಲ್ಲಂಘನೆ ಆಗುವ ಯಾವ ಕೃತ್ಯವೂ ನಡೆದಿಲ್ಲ ಎಂದು ಪ್ರತಿಕ್ರಿಯಿಸಿದ್ದರು.
ಮಾಧ್ಯಮಗಳಿಗೆ ನೋಟಿಸ್ : ಹೈಕೋರ್ಟ್ ತೀರ್ಪಿನ ಬಗ್ಗೆ ಅವಹೇಳನಕಾರಿ ಟೀಕೆ ಮಾಡಿರುವ ಆರೋಪದ ಮೇಲೆ 3 ಪತ್ರಿಕೆಗಳಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತ್ತು.
ವೀರಪ್ಪನ್ ಕಾರ್ಯಾಚರಣೆ ವೇಳೆ ಅಮಾಯಕ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಅನಾಹುತಗಳನ್ನು ಮನಗಂಡ ನ್ಯಾಯಮೂರ್ತಿಗಳು, ತಮ್ಮ ತೀರ್ಪಿನಲ್ಲಿ 'ಇವೆಲ್ಲ ನಿಜವೇ ಆಗಿದ್ದರೆ ಬಿದರಿ ಅವರು ಗಡಾಫಿ, ಸದ್ದಾಂಗಿಂತ ಕಡೆ' ಎಂದಿದ್ದರು. ಆದರೆ ಪ್ರಮಾಣ ಪತ್ರದ ವಿಷಯ ಪ್ರಸ್ತಾಪಿಸದೆಯೇ ನ್ಯಾಯಮೂರ್ತಿಗಳೇ ಖುದ್ದಾಗಿ ಈ ರೀತಿ ಹೇಳಿದ್ದಾರೆ ಎಂಬಂತೆ ಅರ್ಥ ಕಲ್ಪಿಸಿ ಪತ್ರಿಕೆಗಳು ಸುದ್ದಿ ಪ್ರಕಟಿಸಿರುವುದು ಸರಿಯಲ್ಲ ಎಂದು ಆರೋಪಿಸಲಾಗಿದೆ.
ವೀರಪ್ಪನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್ ಬಿದರಿ ಅವರನ್ನು ನರರೂಪದ ರಕ್ಷಸ, ಗಡಾಫಿ ಎಂದು ಕರೆದಿರುವುದು ಸರಿಯಲ್ಲ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.
ಸೇವಾ ಹಿರಿತನ ಮತ್ತು ಉತ್ತಮ ಸೇವಾ ದಾಖಲೆಗಳ ಆಧಾರದ ಮೇಲೆ ಇನ್ಫಾಂಟ್ ಅವರಿಗೆ ಸಿಗಬೇಕಿದ್ದ ಸ್ಥಾನವನ್ನು ಸ್ವಜನಪಕ್ಷಪಾತ ಮಾಡಿ ಶಂಕರ್ ಬಿದರಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.
ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಲಾಲ್ ರುಖಮಾ ಪಚಾವೋ ಅವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಗುರುವಾರ(ಮೇ.31) ಆದೇಶ ಹೊರಡಿಸಿತು. ಡಿಜಿ -ಐಜಿಪಿಯಾಗಿರುವ ಎ.ಆರ್. ಇನ್ಫಾಂಟ್ ಅವರು ಗುರುವಾರ ನಿವೃತ್ತಿಯಾದರು.












Click it and Unblock the Notifications