ರಾಜ್ಯದ ಹಂಗಾಮಿ ಡಿಜಿ ಐಜಿಪಿಯಾಗಿ ಪಚಾವೋ
ಡಿಜಿ ಐಜಿಪಿ ಹುದ್ದೆಗೆ ಪ್ರಶಾಂತ್ ಮಹಾಪಾತ್ರ ಮತ್ತು ರೂಪ್ಕುಮಾರ್ ದತ್ತಾ ಅವರೂ ಸಹ ರೇಸ್ನಲ್ಲಿದ್ದರು. ಆದರೆ, ಸೇವಾ ಹಿರಿತನದ ಆಧಾರದ ಮೇಲೆ ಮಿಜೋರಾಂ ಮೂಲದ ಪಚಾವ್ ಅವರನ್ನು ಹಂಗಾಮಿ ಡಿಜಿ ಐಜಿಪಿಯಾಗಿ ನೇಮಕವಾಗಿದ್ದಾರೆ.
ಈ ಸಂಬಂಧ ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಗೃಹ ಸಚಿವ ಆರ್.ಅಶೋಕ, ಕಾನೂನು ಸಚಿವ ಎಸ್.ಸುರೇಶ್ಕುಮಾರ್ ಮತ್ತು ಮುಖ್ಯಕಾರ್ಯದರ್ಶಿ ಎಸ್.ವಿ. ರಂಗನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆ ಸೇರಿ ಈ ನೇಮಕವನ್ನು ಅಂತಿಮಗೊಳಿಸಿದ್ದಾರೆ.
ಮೂವರು ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ: ಪಚಾವ್, ಮಹಾಪಾತ್ರ ಮತ್ತು ದತ್ತಾ ಅವರ ಪಟ್ಟಿಯನ್ನು ಯುಪಿಎಸ್ಸಿಗೆ ಕಳುಹಿಸಲಾಗುತ್ತೆ. ರಾಜ್ಯ ಸರ್ಕಾರ ಕಳುಹಿಸಲಿರುವ ಶಿಫಾರಸಿನ ಪರಿಶೀಲನೆ ನಡೆಸಲಿರುವ ಯುಪಿಎಸ್ಸಿ ಅಂತಿಮವಾಗಿ ಒಬ್ಬರನ್ನು ಆಯ್ಕೆ ಮಾಡಲಿದೆ. ಇದಕ್ಕೆ ಕನಿಷ್ಟ 15 ದಿನ ಬೇಕಾಗುತ್ತದೆ.
ಈ ನಡುವೆ ರೂಪ್ ಕುಮಾರ್ ದತ್ತಾ ಅವರನ್ನು ಡೆಪ್ಯೂಟೇಷನ್ ಮೇಲೆ ಸಿಬಿಐಗೆ ವರ್ಗಾಯಿಸಲಾಗಿದೆ. ಅಗ್ನಿಶಾಮಕ ದಳ ಡಿಜಿಪಿ ಆಗಿ ಓಂಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ. ಎಡಿಜಿಪಿ ಆಗಿರುವ ಬಿಪಿನ್ ಗೋಪಾಲಕೃಷ್ಣ ಅವಡಿಗೆ ಡಿಜಿಪಿಯಾಗಿ ಬಡ್ತಿ ನೀಡಲಾಗಿದೆ.
ಗುರುವಾರ ಸಂಜೆಯ ವೇಳೆಗೆ ಪಚಾವ್ ಅವರು ಹಂಗಾಮಿ ಡಿಜಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಯುಪಿಎಸ್ಸಿ ಅಂತಿಮ ನೇಮಕಾತಿ ಆದೇಶ ಬರುವವರೆಗೆ ಹಂಗಾಮಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. [ಪಚಾವ್ ಅವರ ವ್ಯಕ್ತಿಚಿತ್ರ ಮಂದೆ ನಿರೀಕ್ಷಿಸಿ...]
ಹೈ ಕೋರ್ಟ್ ಆದೇಶ ಪರಿಗಣಿಸಿ ಹಂಗಾಮಿಯಾಗಿ ಪೊಲೀಸ್ ಮಹಾನಿರ್ದೇಶಕರನ್ನು ನೇಮಿಸುವ ಅಧಿಕಾರ ಮುಖ್ಯಮಂತ್ರಿಗಳಿಗೆ ಇದೆ. ಸಂಜೆ ಅಧಿಕೃತ ಆದೇಶ ಹೊರಡಿಸಲಾಗುತ್ತದೆ ಎಂದು ಅಶೋಕ್ ಹೇಳಿದರು.
ಅಧಿಕಾರಿಗಳ ಬರ : ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಶಂಕರ್ ಬಿದರಿ ಹಾಗೂ ಹಂಗಾಮಿ ಡಿಜಿಪಿ ಎಆರ್ ಇನ್ಫ್ಯಾಂಟ್ ನಿವೃತ್ತಿ ನಂತರ, ಜಿಎಂ ಹಯಾತ್, ಜೀವನ್ಕುಮಾರ್ ವಿ ಗಾಂವ್ಕರ್, ಯು ನಿಸಾರ್ ಅಹಮದ್ ಮತ್ತು ಎಂ ಸಿ ನಾರಾಯಣಗೌಡ ಅವರ ಕರ್ತವ್ಯ ಅವಧಿ ವಷಾಂತ್ಯಕ್ಕೆ ಮುಗಿಯಲಿದೆ.
ಯುಪಿಎಎಸ್ಸಿ ನಿಯಮಗಳ ಪ್ರಕಾರ, ಸೇವೆಯಿಂದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ನಿವೃತ್ತಿ ಹೊಂದುತ್ತಿದ್ದಂತೆ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳ ಜತೆ ಸಮಾಲೋಚನೆ ನಡೆಸಿ ಅಧಿಕಾರಿಗಳನ್ನು ಮಂಜೂರಾತಿ ಮಾಡಬೇಕು.
ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರವೂ ಸಾಮಾನ್ಯವಾಗಿ ವರ್ಷಕ್ಕೆ ಕನಿಷ್ಠ 10 ರಿಂದ 12 ಐಎಎಸ್ ಅಧಿಕಾರಿಗಳು ಹಾಗೂ ಇದೇ ಪ್ರಮಾಣದಲ್ಲಿ ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸುವುದು ರೂಢಿಯಲ್ಲಿದೆ.
ಆದರೆ, ರಾಜ್ಯ ಸರ್ಕಾರಕ್ಕೆ ಅಧಿಕಾರಗಳ ಬರ ನೀಗುವ ಕಮ್ಮಿ ಎನ್ನಬಹುದು. ಯುಪಿಎಸ್ಸಿ ಮೂಲಕ ನೇಮಕಾತಿ ಪ್ರಕ್ರಿಯೆ ಚುರುಕುಗೊಂಡಿಲ್ಲದಿರುವುದು ಹಾಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವಿನ ಜಟಾಪಟಿಯಲ್ಲಿ ಅಧಿಕಾರಿಗಳ ನೇಮಕ ವಿಳಂಬ ಗ್ಯಾರಂಟಿ.