ಬಸ್ಸುಗಳಿಗೆ ಬೆಂಕಿ : ಬಿಎಂಟಿಸಿ ಸಂಚಾರ ಸಂಪೂರ್ಣ ಸ್ಥಗಿತ

ಒಂದು ಕಾರ್ ಮತ್ತು ಮೂರು ಬೈಕಿನಲ್ಲಿ ಬಂದ ಕಿಡಿಗೇಡಿಗಳು ರಾತ್ರಿ 1.30ರ ಸುಮಾರಿಗೆ ಬಿಎಂಟಿಸಿ ಬಸ್ಸುಗಳನ್ನು ನಿಲ್ಲಿಸಿ, ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇಷ್ಟು ಮಾತ್ರವಲ್ಲದೆ ಡ್ರೈವರ್ ಮತ್ತು ನಿರ್ವಾಹಕರನ್ನು ರಕ್ತಬರುವಂತೆ ಥಳಿಸಿದ್ದಾರೆ. ಹುಬ್ಬಳ್ಳಿಯಲ್ಲಿಯೂ ಒಂದು ಕೆಎಸ್ಆರ್ಟಿಸಿ ಬಸ್ಸನ್ನು ಸುಟ್ಟು ಭಸ್ಮ ಮಾಡಲಾಗಿದೆ. ಇದರಿಂದಾಗಿ ಭಾರತ್ ಬಂದ್ಗೆ ನಿನ್ನೆ ರಾತ್ರಿಯಿಂದಲೇ ಬಿಸಿ ತಟ್ಟಿದಂತಾಗಿದೆ.
ಬೆಂಗಳೂರಿನಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಆಟೋ ಸಂಚಾರ ಕೂಡ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಗಿದೆ. ಸಂಜೆ 7 ಗಂಟೆಯ ವರೆಗೂ ಬಸ್ ಸಂಚಾರ ಶುರುವಾಗುವ ಲಕ್ಷಣಗಳಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.
ಬೆಳಗಿನಿಂದಲೇ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಬೆಂಬಲಿತ ಕೆಲ ಸಂಘಟನೆಗಳು ರಸ್ತೆಗಿಳಿದಿದ್ದು, ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ. ಜಯನಗರ 8ನೇ ಬ್ಲಾಕ್, ಮಲ್ಲೇಶ್ವರಂ, ರಾಜಾಜಿನಗರದ ಕೆಲ ಬಡಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದಾರೆ. ಜಿಗಣಿ, ಹಳೆ ಏರ್ಪೋರ್ಟ್ ರಸ್ತೆಯಲ್ಲಿ ಅನೇಕ ಬಸ್ಸುಗಳಿಗೆ ಕಲ್ಲು ತೂರಲಾಗಿದೆ.
ಭಾರೀ ಬಂದೋಬಸ್ತ್ : ಬೆಂಗಳೂರು ನಗರದಾದ್ಯಂತ ಜನರು ಹಿಂಸಾಚಾರಕ್ಕಿಳಿಯದಂತೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುಮಾರು 18 ಸಾವಿರ ಪೊಲೀಸರು ಎಲ್ಲ ಬಡಾವಣೆಗಳಲ್ಲಿ ಕಟ್ಟೆಚ್ಚರದಿಂದ ಗಸ್ತು ತಿರುಗುತ್ತಿದ್ದಾರೆ. ನಗರದ ರಸ್ತೆಗಳೆಲ್ಲ ಭಣಭಣ ಎನ್ನುತ್ತಿದ್ದು ಜನ ಮನೆಯಿಂದ ಹೊರಬರುತ್ತಿಲ್ಲ. ಅನೇಕ ಸಾಫ್ಟ್ವೇರ್ ಕಂಪನಿಗಳಿಗೆ ಇಂದು ರಜಾ ಘೋಷಿಸಲಾಗಿದೆ.
ಶಾಲಾ ಕಾಲೇಜು ರಜಾ : ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಎಲ್ಲ ಶಾಲೆ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜಾ ಘೋಷಿಸಿದ್ದಾರೆ. ರಾಜ್ಯದಲ್ಲಿ ತುಮಕೂರು, ಮೈಸೂರು, ಕೊಡಗು, ಚಿತ್ರದುರ್ಗ, ಹಾವೇರಿ, ಬಿಜಾಪುರ, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ರಾಮನಗರ, ಉಡುಪಿ, ಬಳ್ಳಾರಿ, ಗುಲಬರ್ಗಾ, ಚಿಕ್ಕಬಳ್ಳಾಪುರ, ಮಂಡ್ಯ ಮುಂತಾದೆಡೆಗಳಲ್ಲಿಯೂ ಬಸ್ ಸಂಚಾರ ಸ್ಥಗಿತಗೊಂಡಿದ್ದು ಶಾಲೆ ಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ.












Click it and Unblock the Notifications