ಜೈಲನ್ನೇ ಆಫೀಸ್ ಮಾಡಿಕೊಂಡ ಜಗನ್ನಿಗೆ 'ED' ಭೀತಿ

ಚಂಚಲಗೂಡ ಜೈಲಿನ ತಮ್ಮ ಕೊಠಡಿಯಲ್ಲೇ ಕೂತು ಜಗನ್ ಸುಮಾರು ಒಂದು ಗಂಟೆ 45 ನಿಮಿಷಗಳ ಕಾಲ ತಮ್ಮ ಕುಟುಂಬ ಹಾಗೂ ಆಪ್ತರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಸದ್ಯಕ್ಕೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಜಗನ್ ತಾಯಿ ವೈಎಸ್ ವಿಜಯಮ್ಮಗೆ ನೀಡಲಾಗಿದೆ.
ಜಗನ್ ಪತ್ನಿ ಭಾರತಿ, ಸೋದರಿ ಶರ್ಮಿಳಾ, ಬಾವ ಅನಿಲ್ ಹಾಗೂ ಮಾವ ಇಸಿ ಗಂಗಿರೆಡ್ಡಿ, ಅಕ್ರಮ ಆಸ್ತಿ ಪ್ರಕರಣದಲ್ಲಿ ಸಹ ಆರೋಪಿಯಾಗಿ ಜಾಮೀನು ಪಡೆದಿರುವ ವಿ ವಿಜಯ್ ಸಾಯಿ ರೆಡ್ಡಿ ಅವರು ಜಗನ್ ಜೊತೆ ಸಮಾಲೋಚನೆ ನಡೆಸಿದರು. ವೈಎಸ್ ವಿಜಯಮ್ಮ ನೇತೃತ್ವದಲ್ಲಿ ಶ್ರೀಕಾಕುಳಂ ಜಿಲ್ಲೆಯಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಜಗನ್ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಗನ್ ಗೆ ಇಡಿ ಉರುಳು?: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೊಳಗಾಗಿರುವ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿವಿಚಾರಣೆ ನಡೆಸಲು ದೆಹಲಿಯಿಂದ ಜಾರಿ ನಿರ್ದೇಶನಾಲಯ(Enforcement Directorate (ED))ದ ತಂಡ ವೊಂದು ಹೈದರಾಬಾದ್ಗೆ ಬಂದಿದೆ.
ಸಿಬಿಐ ಅಧಿಕಾರಿಗಳ ಜತೆ ED ತಂಡ ಚರ್ಚೆ ನಡೆಸಿದ್ದು, ಜಗನ್ ವಿಚಾರಣೆಗೆ ಅನುಮತಿ ಕೋರಿ ಸ್ಥಳೀಯ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಿದೆ ಎಂದು ಜಾರಿ ನಿರ್ದೇಶನಾಲಯದ ಸಿಬ್ಬಂದಿ ಹೇಳಿದ್ದಾರೆ.
ಕಡಪ ಸಂಸದ ಜಗನ್ಮೋಹನ್ ರೆಡ್ಡಿ ವಿರುದ್ಧ ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ಉಲ್ಲಂಘನೆ Foreign Exchange Management Act (FEMA)ಮತ್ತು ಹಣ ಲೇವಾದೇವಿ ನಿಯಂತ್ರಣ ಕಾಯ್ದೆ Prevention of Money Laundering Act (PMLA) ಅನ್ವಯ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದುವರೆಗೂ ನ್ಯಾಯಾಲಯಕ್ಕೆ ಮೂರು ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.ಈ ಪೈಕಿ ಮೊದಲ ಚಾರ್ಚ್ ಶೀಟ್ ಪ್ರತಿಯನ್ನು ಇಡಿ ತಂಡ ಪಡೆದು ಪರಿಶೀಲಿಸುತ್ತಿದೆ.
ಜಾಮೀನು ಅರ್ಜಿ : ಜಗನ್ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಮೇ 31ಕ್ಕೆ ಮುಂದೂಡಿದೆ.
ಜಗನ್ ಸಲ್ಲಿಸಿದ ಜಾಮೀನು ಮನವಿ ಅರ್ಜಿಯನ್ನು ಅಂಗೀಕರಿಸಿದ ಸಿಬಿಐ ವಿಶೇಷ ನ್ಯಾಯಾಲಯ ಮುಂದಿನ ವಿಚಾರಣೆಯಲ್ಲಿ ಪ್ರತಿ ಹೇಳಿಕೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿತು. ಸೋಮವಾರ ಜಗನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ನ್ಯಾಯಾಲಯ ಅವರನ್ನು ಜೂನ್ 11ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಿತ್ತು.












Click it and Unblock the Notifications