ಸುಸಜ್ಜಿತ ಜಯನಗರದಲ್ಲಿರುವ ಕಸದ ತೊಟ್ಟಿಯ ಕಥೆ
ಬೆಂಗಳೂರು, ಮೇ 30 : ಕಸದ ತೊಟ್ಟಿ ಎಲ್ಲಿದ್ದರೂ ಒಂದೇ ತಾನೆ? ಕಲಾಸಿಪಾಳ್ಯದಲ್ಲಿದ್ದರೇನು, ಸೋಕಾಲ್ಡ್ ಶ್ರೀಮಂತ ವರ್ಗ ವಾಸಿಸುವ ಜಯನಗರ 3ನೇ ಬ್ಲಾಕ್ನಲ್ಲಿದ್ದರೇನು? ಅತ್ಯಂತ ವ್ಯವಸ್ಥಿತವಾಗಿ ಸುಸಜ್ಜಿತವಾದ ಕಸದ ತೊಟ್ಟಿಯನ್ನು ಬಿಬಿಎಂಪಿ ಒದಗಿಸಿದರೂ, ಕಸವನ್ನು ಕಸದ ತೊಟ್ಟಿಯ ಹೊರಗೆ ಎಸೆಯುವುದನ್ನು ನಮ್ಮ ಜನ ಬಿಡುವುದಿಲ್ಲ.

ಜಯನಗರ 3ನೇ ಬ್ಲಾಕ್ನ ಎಲಿಫೆಂಟ್ ರಾಕ್ ರಸ್ತೆಗೆ ಲಂಬಕೋನವಾಗಿ, ಆರ್ ಆರ್ ಗೋಲ್ಡ್ ಪ್ಯಾಲೇಸ್ ಪಕ್ಕದಲ್ಲಿ ಹಾದುಹೋಗುವ 8ನೇ ಮುಖ್ಯರಸ್ತೆಯ, 16ಎ ಅಡ್ಡ ರಸ್ತೆಯಲ್ಲಿ ಮಸೀದಿ ಪಕ್ಕದಲ್ಲಿ ಇರಿಸಲಾಗಿರುವ ಸುಸಜ್ಜಿತ ಕಸದ ತೊಟ್ಟಿಯು ತನ್ನ ಕಥೆಯನ್ನು ತಾನೇ ಹೇಳುತ್ತದೆ. ಕಸದ ತೊಟ್ಟಿ ಎಲ್ಲಿದ್ದರೂ ಕಸದ ತೊಟ್ಟಿಯೇ ಎಂಬುದಕ್ಕೆ ಸ್ಪಷ್ಟ ನಿದರ್ಶನ ಇಲ್ಲಿದೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರ, ಯಡಿಯೂರು ವಾರ್ಡ್ ಸಂಖ್ಯೆ 167ರ ಅಡಯಲ್ಲಿ ಬರುವ ಜಯನಗರ 3ನೇ ಬ್ಲಾಕ್ನ ಮೇಲೆ ತಿಳಿಸಿರುವ ರಸ್ತೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಕಸದ ತೊಟ್ಟಿಯನ್ನು ನಾಗರಿಕರಿಗೆ ದಯಪಾಲಿಸಿದೆ. ಈ ಕ್ಷೇತ್ರಕ್ಕೆ ಗೃಹ ಸಚಿವರಾದ ಮಾನ್ಯ ಆರ್ ಅಶೋಕ್ ಅವರು ಸಚಿವರು ಮತ್ತು ಎನ್ಆರ್ ರಮೇಶ್ ಈ ವಾರ್ಡಿನ ಕಾರ್ಪೊರೇಟರ್.
ಸುತ್ತಮುತ್ತ ನೋಡಿದರೆ ಬಡಾವಣೆ ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದೆ. ಐಷಾರಾಮಿ ಮನೆಗಳು, ಮುಂದೆ ನಾಕಾರು ಕಾರುಗಳು, ಸ್ವಚ್ಛ ಗಲ್ಲಿಗಳು, ರಸ್ತೆಯ ಅಕ್ಕಪಕ್ಕದಲ್ಲಿ ನೆರಳು ಸುರಿಸುವ ಮರಗಳು, ರಸ್ತೆಯ ಅದಿಬದಿ ನಿಂತಿರುವ ಐಷಾರಾಮಿ ಕಾರುಗಳು. ಈ ಕಸದ ತೊಟ್ಟಿ ಇಲ್ಲಿಗೆ ಬರುವವರೆಗೆ ರಸ್ತೆ ಕೂಡ ಸ್ವಚ್ಛವಾಗೇ ಇತ್ತು. ಆದರೆ, ಬೃಹತ್ ಕಸದ ತೊಟ್ಟಿಯನ್ನು ತಂದಿಟ್ಟಿದ್ದೇ ತಂದಿಟ್ಟಿದ್ದು. ನಾಮುಂದು ತಾಮುಂದು ಎಂದು ಜನ ಕಸ ಹಾಕಲು ಪ್ರಾರಂಭಿಸಿದರು.
ತೊಟ್ಟಿ ತುಂಬಿತೋ ಬಿಟ್ಟಿತೋ ಕಸ ಮಾತ್ರ ರಸ್ತೆಯನ್ನು 'ಅಲಂಕರಿಸಲು' ಪ್ರಾರಂಭಿಸಿತು. ಕ್ರಮೇಣ ಗಬ್ಬು ವಾಸನೆ ಗಲ್ಲಿಗಲ್ಲಿ ದಾಟಿ ಎಲ್ಲೆಡೆ ಪಸರಿಸಲು ಆರಂಭವಾಯಿತು. ಕಸವನ್ನು ತೊತಟ್ಟಿಯಲ್ಲಿಯೇ ಹಾಕುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವಲ್ಲವೆ? ಸದ್ಯಕ್ಕೆ ಆ ದಾರಿಯಲ್ಲಿ ಕಾಲು ಕೂಡ ಹಾಕಬಾರದು ಎಂಬಷ್ಟು ಹೊಲಸೆದ್ದು ಹೋಗಿದೆ. ಈಗಾಗಲೆ ಎರಡ್ಮೂರು ಬೀದಿ ನಾಯಿಗಳು ಬೀಡು ಬಿಟ್ಟಿವೆ. ಬಿಡಾಡಿ ದನಗಳು ಬಂದು ಝೇಂಡಾ ಊರಿದರೂ ಅಚ್ಚರಿಯಿಲ್ಲ.
ಕಸದ ತೊಟ್ಟಿ ಇರುವ ಪಕ್ಕದ 16ಎ ಅಡ್ಡರಸ್ತೆಯ ತುದಿಯಲ್ಲಿ ಈ ಕ್ಷೇತ್ರದ ಶಾಸಕರು ಯಾರು ಮತ್ತು ಕಾರ್ಪೊರೇಟರ್ ಯಾರು ಎಂದು ಬೋರ್ಡ್ ನೆಡಲಾಗಿದೆ. ಅದರಲ್ಲಿ ಅವರ ಹೆಸರು ಮತ್ತು ದೂರು ಸಲ್ಲಿಸಬೇಕಾದ ಫೋನ್ ನಂಬರನ್ನು ಕೂಡ ನಮೂದಿಸಲಾಗಿದೆ. ಆದರೆ, ತಾವು ತಮ್ಮ ಕೆಲಸ ಎಂಬಂತಿರುವ ನಾಗರಿಕರು ಮಾತ್ರ ಯಾರಿಗೂ ದೂರು ಕೊಟ್ಟಂತೆ ಕಾಣುವುದಿಲ್ಲ.
ವಿಶ್ವ ಪರಿಸರ ದಿನ ಇನ್ನೇನು ಹತ್ತಿರ ಬರುತ್ತಿದೆ. ಇಂಥ ಸಂದರ್ಭದಲ್ಲಿ ನಾಗರಿಕರೇ ಪರಿಸರವನ್ನು ಹಾಳುಗೆಡವುತ್ತಿದ್ದಾರೆ. ರಸ್ತೆಯಲ್ಲಿ ದಿನನಿತ್ಯ ಸಂಚರಿಸುವವರಿಗೆ ಪರಸರದ ಬಗ್ಗೆ ಕಾಳಜಿಯಿದ್ದರೆ, ಮೂಗು ಮುಚ್ಚಿಕೊಳ್ಳದೆ ಓಡಾಡುವುದು ಕಷ್ಟವಾಗುತ್ತಿದ್ದರೆ ಅಥವಾ ಬೇರೇನಾದರೂ ಕುಂದು ಕೊರತೆಗಳಿದ್ದರೆ ಇಲ್ಲಿ ಸೂಚಿಸಲಾಗಿರುವ ನಂಬರಿಗೆ ದೂರು ನೀಡಬಹುದು. ಮೊಬೈಲ್ ಸಂಖ್ಯೆ : 98800 11999, 98459 87074. ಎಷ್ಟಿದ್ದರೂ ದೂರು ಸ್ವೀಕರಿಸಬೇಕಾಗಿರುವವರು ನೀವೇ ಆರಿಸಿ ಕಳಿಸಿದ ಪ್ರಜೆಗಳಲ್ಲವೆ?
ಕೋರಿಕೆ : ನಿಮ್ಮ ಬಡಾವಣೆ ಹೇಗಿದೆ?ನಿಮ್ಮ ಬಡಾವಣೆಯಲ್ಲಿ ಇದೇ ರೀತಿ ಕಸವನ್ನು ಬೇಕಾಬಿಟ್ಟಿ ಚೆಲ್ಲಾಪಿಲ್ಲಿ ಮಾಡಿದ್ದರೆ ಚಿತ್ರಸಮೇತ ಪುಟ್ಟ ವರದಿ ಬರೆದು ನಮಗೆ ಕಳಿಸಿ, ಪ್ರಕಟಿಸುತ್ತೇವೆ. ಈ ಅಭಿಯಾನದಿಂದಲಾದರೂ ನಾಗರಿಕರು ಮತ್ತು ಬಿಬಿಎಂಪಿ ಎಚ್ಚೆತ್ತುಕೊಳ್ಳಲಿ. ನಮ್ಮ ಈಮೇಲ್ ವಿಳಾಸ : [email protected]












Click it and Unblock the Notifications