ಯುಪಿಎ ಟಿವಿ ಜ್ಯೋತಿಷಿ ಬಾಬಾ ಇದ್ದಂತೆ: ಮೋದಿ

ನರೇಂದ್ರ ಮೋದಿ ಹೇಳುವಂತೆ ನಿರ್ಮಲ ಬಾಬಾ ಕಳಂಕಿತ, ಅವರೊಬ್ಬ ವಂಚಕ ಗುರು. ಕೇಂದ್ರದ ಆಡಳಿತಾರೂಢ ಯುಪಿಎ ಸರಕಾರವು ಸಂಪೂರ್ಣ ಆಡಳಿತ ವೈಫಲ್ಯ ಕಂಡಿದೆ. ಅದು ಟಿವಿ ಜ್ಯೋತಿಷಿ ನಿರ್ಮಲ್ ಬಾಬಾ ಮಾದರಿಯಲ್ಲಿದೆ. ದೇಶದಲ್ಲಿ ನಾಯಕತ್ವವೇ ಇಲ್ಲ ಎಂದು ಮೋದಿ ಟೀಕಿಸಿದ್ದಾರೆ.
ಗಗನಚುಂಬಿ ಹಣದುಬ್ಬರ, ಹಗರಣಗಳ ಸರಮಾಲೆ, ಇದೀಗ ಪೆಟ್ರೋಲ್ ಬಾಂಬ್ ಸಿಡಿಸಿರುವ ಯುಪಿಎ ಮೇಲೆ ಮುಗಿಬಿದ್ದ ಮೋದಿ, ಕೇಂದ್ರದ ಯುಪಿಎ ಸರಕಾರವನ್ನು ಜನತಾ ಕೋರ್ಟಿನಲ್ಲಿ ಆರೋಪಿಯಾಗಿ ನಿಲ್ಲಿಸಬೇಕಾದ ಜರೂರತ್ತು ಇದೆ ಎಂದಿದ್ದಾರೆ.
'ದೆಹಲಿಯಲ್ಲಿ ಒಂದು ಸರಕಾರವಿದೆ. ಅದು 'ವಂಚಕ ದೇವಮಾನವ' ನಿರ್ಮಲ ಬಾಬಾನ ದರ್ಬಾರಿನಂತೆ ಇದೆ. ಕೇವಲ ಒಂದು ಸಿಹಿ ತಿಂಡಿ ನೀಡಿದರೆ ಆಶೀರ್ವದಿಸುವುದಾಗಿ ಬಾಬಾ ಹೇಳಿಕೊಳ್ಳುತ್ತಾರೆ. ದೆಹಲಿ ಸರಕಾರವೂ ಹಾಗೆಯೇ. ವೋಟು ಹಾಕಿ ನಮ್ಮನ್ನು ಅಧಿಕಾರದ ಗದ್ದುಗೆಗೆ ತನ್ನಿ. ಹಣದುಬ್ಬರದಂತಹ ಸಮಸ್ಯೆಗಳನ್ನು 100 ದಿನಗಳಲ್ಲಿ ನಿವಾರಿಸುತ್ತೇವೆ' ಎಂದು ಹೇಳಿಕೊಳ್ಳುತ್ತಿದೆ.
ಇದು ವಂಚಕ ಬಾಬಾ ಹೇಳುವ ಹಾಗೆ ಇದೆ. ಬಾಬಾ ಆಗ್ಲೋ ಈಗ್ಲೋ ಜೈಲಿಗೆ ಹೋಗಹುದು. ಆದರೆ ನಾನು ಜನತಾ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸುತ್ತೇನೆ' ಎಂದು ಮೋದಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಹೇಳಿದ್ದಾರೆ.
'ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ್ದ ಭರವಸೆಗಳನ್ನೇ ಈಡೇರಿಸಿಲ್ಲ. ಜನರನ್ನು ತಪ್ಪು ಹಾದಿಗೆ ಎಳೆಯುತ್ತಿದೆ. 'ವಂಚಕ ದೇವಮಾನವ' ನಿರ್ಮಲ ಬಾಬಾ ತನ್ನ ಕಪಟ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ ಈ ಸರಕಾರವೂ ಇದೆ. ಕಪಟ ನಿರ್ಮಲ ಬಾಬಾಗಳು ಯುಪಿಎ ಸರಕಾರದಲ್ಲಿ ಹತ್ತಾರು ಮಂದಿ ಇದ್ದಾರೆ' ಎಂದು ಮೋದಿ ಕಿಡಿಕಾರಿದ್ದಾರೆ.
ಮೋದಿ ಹಿಟ್ಲರ್ ಸಾಮ್ರಾಜ್ಯದ ಸಚಿವನಿದ್ದಂತೆ: ಯುಪಿಎ ಸರಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ ಮೋದಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಗುಜರಾತಿನ ಹತಾಶ ಮುಖ್ಯಮಂತ್ರಿ ಮೋದಿ ಆತ್ಮಕ್ಕೆ ಹಿಟ್ಲರ್ ನ ಪ್ರಚಾರಕ ಸಚಿವನಾಗಿದ್ದ ಜೋಸೆಫ್ ಗೊಬೆಲ್ಸ್ ಪರಕಾಯ ಪ್ರವೇಶ ಮಾಡಿದಂತಿದೆ. ಮೋದಿ, ಅಸಾಂವಿಧಾನಿಕ ಪದಗಳ ಪ್ರಯೋಗ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅವರು ಮೋದಿಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications