ಯಾತ್ರೆಗೆ ಹೋಗಿ ಮಸಣ ಸೇರಿದ ನತದೃಷ್ಟರು
ಚಿಕ್ಕಮಗಳೂರು ಜಿಲ್ಲೆ ಕಡೂರಿನ ಗೆದ್ದಲಹಳ್ಳಿ ಸಮೀಪ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಈ ಘಟನೆಯಿಂದ ಬಸ್ ನಲ್ಲಿದ್ದ ಐವರಿಗೆ ತೀವ್ರ ಗಾಯಗಳಾಗಿದೆ. ಗಾಯಗೊಂಡವರನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಎದುರುಗಡೆಯಿಂದ ಬಂದ ಕಾರು ಬೆಳಗ್ಗೆ ಸುಮಾರು 3.45 ರಿಂದ 4 ಗಂಟೆ ಸುಮಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನಲ್ಲಿ ಸುಖನಿದ್ರೆಯಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಕಾರಿನ ಚಾಲಕ ಮುಂಬದಿಯಲ್ಲಿದ್ದ ವಾಹನವನ್ನು ಓವರ್ ಟೇಕ್ ಬರದಲ್ಲಿ ಎದುರುಗಡೆಯಿಂದ ಸಾಮಾನ್ಯವೇಗದಲ್ಲಿ ಬರುತ್ತಿದ್ದ ಬಸ್ಸಿಗೆ ಬಂದು ಅಪ್ಪಳಿಸಿದ್ದು ದುರಂತಕ್ಕೆ ಕಾರಣವಾಯಿತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿಕೆ ನೀಡಿದ್ದಾರೆ.
ದೇವರು ಕಾಪಾಡಲಿಲ್ಲ: ಮೃತ ಕುಟುಂಬದವರು ತುಮಕೂರು ಮೂಲದವರಾಗಿದ್ದು. ತುಮಕೂರಿನ ಸಿದ್ದಗಂಗಾ ಬಡಾವಣೆಯ ನಿವಾಸಿಗಳು ಎಂದು ತಿಳಿದುಬಂದಿದೆ. ದೇಗುಲ ದರ್ಶನಕ್ಕೆ ಹೋಗಿ ಹಿಂತಿರುಗುತ್ತಿದ್ದರು.
ಧರ್ಮಸ್ಥಳ, ಶೃಂಗೇರಿ, ಸಿಗಂದೂರು ದೇಗುಲಗಳ ದರ್ಶನ ಪಡೆದು ತುಮಕೂರಿಗೆ ಹೊರಟಿದ್ದವರು ದುರಂತ ಸಾವನ್ನಪ್ಪಿದ್ದಾರೆ. ಮೃತರನ್ನು ಚಾಲಕ ಶರಣ್ ಕುಮಾರ್, ವಿನಾಯಕ, ವಾಣಿ, ಭಾಗೀರಥಿ, ಪದ್ಮಮ್ಮ ಎಂದು ಗುರುತಿಸಲಾಗಿದೆ.