ಯಡಿಯೂರಪ್ಪ ಅವರಿಗೆ ಜಾಮೀನು ಏಕೆ ಬೇಕು?
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ಇನ್ನೂ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ಪ್ರಮುಖ ಆರೋಪಿ ಯಡಿಯೂರಪ್ಪ ಅವರಿಗೆ ಜಾಮೀನು ನೀಡುವುದು ಸರಿಯಲ್ಲ ಎಂದು ಸಿಬಿಐ ತಂಡ ಆಕ್ಷೇಪ ವ್ಯಕ್ತಪಡಿಸಿತು. ಸಿಬಿಐ ಪರ ವಕೀಲರ ವಾದವನ್ನು ನ್ಯಾಯಲಯ ಪುರಸ್ಕರಿಸಿದೆ.
ಸಿಬಿಐ ಎತ್ತಿರುವ ಆಕ್ಷೇಪಣೆ ವಿರುದ್ಧ ವಾದ ಮಂಡಿಸಲು ಯಡಿಯೂರಪ್ಪ ಪರ ವಕೀಲರಿಗೆ ನ್ಯಾ. ವೆಂಕಟ್ ಸುದರ್ಶನ್ ಅವರು ಅವಕಾಶ ನೀಡಿ ಮುಂದಿನ ವಿಚಾರಣೆಯನ್ನು ಮೇ.29ಕ್ಕೆ ಮುಂದೂಡಿದ್ದಾರೆ.
ರಾಚೇನಹಳ್ಳಿ ಡಿನೋಟೀಫಿಕೇಷನ್ ಪ್ರಕರಣ, ಗಣಿಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಸಿ ವರದಿ ಆಧಾರಿಸಿ ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು.
ಯಡಿಯೂರಪ್ಪ ಹಾಗೂ ಆಪ್ತರ ಮನೆ ಮೇಲೆ ಸಿಬಿಐ ತಂಡ ಮೇ.16 ರಂದು ದಾಳಿ ನಡೆಸಿತ್ತು. ನಂತರ ಬಿಎಸ್ ಯಡಿಯೂರಪ್ಪ, ಸಂಸದ ಬಿವೈ ರಾಘವೇಂದ್ರ, ಬಿವೈ ವಿಜೇಂದ್ರ, ಅಳಿತ್ಯ ಸೋಹನ್ ಕುಮಾರ್ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಇದಕ್ಕೂ ಮುನ್ನ ರಜಾ ಕಾಲದ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಯಡಿಯೂರಪ್ಪ ಅವರ ಅರ್ಜಿ ವಿಚಾರಣೆ ನಡೆದಿತ್ತು. ಗುರುವಾರ (ಮೇ.17) ಸಿಬಿಐ ಪರ ವಕೀಲರು ಲಿಖಿತ ಆಕ್ಷೇಪಣಾ ಅರ್ಜಿ ಸಲ್ಲಿಸಿದರು. ನ್ಯಾ. ಬಿ. ಶಿವಲಿಂಗೇ ಗೌಡ ಅವರು ಮುಂದಿನ ವಿಚಾರಣೆಯನ್ನು ಮೇ.25ಕ್ಕೆ ಮುಂದೂಡಿದ್ದರು.
Mines and Minerals (Development and. Regulation) Act, ಐಪಿಸಿ ಸೆಕ್ಷನ್ 210, 409, 419 ಮತ್ತು 120-B(ಕ್ರಿಮಿನಲ್ ಸಂಚು) ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿಯಲ್ಲಿ FIR ದಾಖಲಿಸಲಾಗಿದೆ.