ರಾಜಕೀಯ ವಿಪ್ಲವಕ್ಕೆ ಆಂಧ್ರ 'ಸಾಕ್ಷಿ'ಯಾಗಲಿದೆಯಾ?
ಈ ಹಿಂಸಾಚಾರವನ್ನು ನೆಪವಾಗಿಸಿಕೊಂಡು ಜೂನ್ 12ರ ಉಪಚುನಾವಣೆಯನ್ನು (ಒಂದು ಲೋಕಸಭೆ ಸ್ಥಾನ ಮತ್ತು 18 ವಿಧಾನಸಭಾ ಸ್ಥಾನಗಳು) ಮುಂದೂಡುವ ಎಣಿಕೆ ಇದರಲ್ಲಡಗಿದೆ. ಇದನ್ನೇ ವಿವರಿಸಿ ಜಗನ್, ಪ್ರಧಾನಿ ಸಿಂಗ್ ಮತ್ತು ಮುಖ್ಯ ಚುನಾವಣೆ ಆಯುಕ್ತ ಖುರೇಶಿಗೆ ಪತ್ರ ಬರೆದಿದ್ದಾರೆ.
ಈ ಮಧ್ಯೆ, ಗುಪ್ತಚರ ಮಾಹಿತಿಯನ್ನು ಆಧರಿಸಿ, ರಾಜಧಾನಿ ಹೈದರಾಬಾದ್ ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸ್ ಆಡಳಿತವು ಕಟ್ಟೆಚ್ಚರ ವಹಿಸಿದ್ದು, ಹೈದರಾಬಾದಿನಲ್ಲಿ ಈಗಾಗಲೇ ನಿಷೇದಾಜ್ಞೆ ಜಾರಿಗೊಳಿಸಿದೆ.
ಸಂಭಾವ್ಯ ಹಿಂಸಾಚಾರವನ್ನು ತಡೆಗಟ್ಟಲು ಪೊಲೀಸರು ಒಂದು ವಾರದಿಂದ ಸಿದ್ಧತೆ ನಡೆಸಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಪೊಲೀಸರನ್ನು ಸನ್ನದ್ಧಗೊಳಿಸಲಾಗಿದೆ. ಸಶಸ್ತ್ರ ಮೀಸಲು ಪಡೆಯೂ ಟೊಂಕಕಟ್ಟಿ ನಿಂತಿದೆ. ರಾಯಸೀಮಾ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಜಗನ್ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿದ್ದು, ಅವರ ಬಂಧನವಾದರೆ ಹಿಂಸಾಚಾರಕ್ಕಿಳಿಯುವ ಸೂಚನೆಗಳಿವೆ ಎನ್ನಲಾಗಿದೆ.
ಮೇ 28ರಂದು ಜಗನ್ ಸಿಬಿಐ ಕೋರ್ಟಿನಲ್ಲಿ ಹಾಜರಾಗಬೇಕಿದ್ದು, ಅದಕ್ಕೂ ಮುನ್ನ ಅಥವಾ ಅಂದೇ ಜಗನ್ ನನ್ನು ಸಿಬಿಐ ಬಂಧಿಸುವ ಸಾಧ್ಯತೆಯಿದೆ. ಇದರಿಂದ ರಾಜ್ಯದಲ್ಲಿ ಹಿಂಸಾಚಾರ ಭುಗಿಲೇಳಲಿದೆ ಎಂಬುದು ಪೊಲೀಸರ ವಾದ. ಆದರೆ ನನ್ನ ಬಂಧನವನ್ನು ನೆಪವಾಗಿಸಿಕೊಂಡು ಆಡಳಿತಾರೂಢ ಕಾಂಗ್ರೆಸ್ ಮತ್ತು ಟಿಡಿಪಿ ನಾಡಿನಲ್ಲಿ ಹಿಂಸಾಚಾರ ಎಬ್ಬಿಸಲಿದೆ ಎಂಬುದು ಜಗನ್ ಬಿರು ನುಡಿ.
ಈ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ವಯಲಾರ್ ರವಿ ಕಳೆದ ವಾರ ಹೈದರಾಬಾದಿಗೆ ಭೇಟಿ ನೀಡಿದ್ದರು. ಆಗ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಸಿಬಿಐ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಮತ್ತು ಡಿಜಿಪಿ ವಿ. ದಿನೇಶ್ ರೆಡ್ಡಿ ಜತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಒಂದು ವೇಳೆ ಹಿಂಸಾಚಾರ ತಾಂಡವವಾಡಿದರೆ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಈ ವಿಶೇಷ ಸಭೆ ಕರೆಯಲಾಗಿತ್ತು ಎಂದು ತಿಳಿದುಬಂದಿದೆ.
ಆದರೆ ಜಗನ್ ಹೇಳುವುದೇ ಬೇರೆ... ಈ ಸಭೆಯಲ್ಲಿ ತನ್ನ ಬಂಧನವಾಗುತ್ತಿದ್ದಂತೆ ಜಗನ್ ಅಭಿಮಾನಿಗಳೇ ಹಿಂಸಾಚಾರ ನಡೆಸುತ್ತಿದ್ದಾರೆ ಎಂದು ಗುಲ್ಲೆಬ್ಬಿಸಿ, 'ಸರಕಾರಿ ಪ್ರಾಯೋಜಿತ' ಹಿಂಸಾಚಾರಕ್ಕೆ ಕಿಡಿ ಹಚ್ಚುವ ಬಗ್ಗೆ ಈ ನಾಯಕರು ಚರ್ಚಿಸಿದ್ದಾರೆ ಎಂಬುದು ಜಗನ್ ಬಲವಾದ ವಾದ. ಒಟ್ಟಿನಲ್ಲಿ ಆಂಧ್ರ ಯಾವುದೇ ಕ್ಷಣ ಹಿಂಸಾಚಾರಕ್ಕೆ ಸಾಕ್ಷಿಯಾಗಬಹುದು.