ಬೆಂಗಳೂರು: ಜನಾರ್ದನ ರೆಡ್ಡಿಗೆ ಜಾಮೀನು ಸಿಕ್ತಾ!?

'MMC ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಮಾಜಿ ಸಚಿವ, ಗಣಿ ಧಣಿ ಜನಾರ್ದನ ರೆಡ್ಡಿ ಮತ್ತು ಅವರ ಆಪ್ತ ಅಲಿಖಾನ್ ಅವರಿಬ್ಬರ ವಿಚಾರಣೆ ಮಂದುವರಿದಿದೆ. ಈ ಹಂತದಲ್ಲಿ ಅವರನ್ನು ಬಿಡುಗಡೆ ಮಾಡಿದರೆ ತನಿಖೆಗೆ ಅಡ್ಡಿಪಡಿಸಬಹುದು. ಆದ್ದರಿಂದ ಅವರಿಗೆ ಜಾಮೀನು ನೀಡುವುದು ಉಚಿತವಲ್ಲ' ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಬುಧವಾರ ಮೊರೆಯಿಟ್ಟಿತು.
ನ್ಯಾಯಾಲಯವು ಸಿಬಿಐ ವಾದವನ್ನು ಪುರಸ್ಕರಿಸಿ, ರೆಡ್ಡಿಗೆ ಜೂನ್ 5 ರವರೆಗೂ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತು. ಇದರೊಂದಿಗೆ ಜನಾರ್ದನ ರೆಡ್ಡಿ ಜಾಮೀನಿಗಾಗಿ ಖ್ಯಾತ ವಕೀಲರಾದ ರಾಮ್ ಜೇಠ್ಮಲಾನಿ ಮಂಡಿಸಿದ ಪ್ರತಿವಾದವೂ ನಿಷ್ಫಲವಾಯಿತು.
ಗಮನಾರ್ಹವೆಂದರೆ ಆಂಧ್ರದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಸಂಬಂಧ ರೆಡ್ಡಿಗೆ ಹೈದರಾಬಾದಿನ ನಾಂಪಲ್ಲಿ ಸಿಬಿಐ ಕೋರ್ಟ್ ಮೇ 11 ರಂದು ಜಾಮೀನು ನೀಡಿದೆ. ಆದರೆ ಸಿಬಿಐ ಅದಾಗಲೇ ಹೈಕೋರ್ಟಿನಲ್ಲಿ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದೆ.
ಓಬಳಾಪುರಂ ಮೈನಿಂಗ್ ಕಂಪನಿಯು ಆಂಧ್ರದ ಗಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಆಂಧ್ರ ಸಿಬಿಐ ಪೊಲೀಸರು ಜನಾರ್ದನ ರೆಡ್ಡಿ ಮತ್ತು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿಯನ್ನು ಕಳೆದ ವರ್ಷ ಸೆಪ್ಟಂಬರ್ನಲ್ಲಿ ಬಳ್ಳಾರಿಯಲ್ಲಿ ಬಂಧಿಸಿದ್ದರು. ಹೀಗಾಗಿ, ಸುಮಾರು ಆರು ತಿಂಗಳು ರೆಡ್ಡಿ ಚಂಚಲಗೂಡ ಜೈಲಿನಲ್ಲಿದ್ದರು.
ಬಳಿಕ ಕರ್ನಾಟಕದಲ್ಲಿ ನಡೆಸಿರುವ ಅಕ್ರಮ ಗಣಿಗಾರಿಕೆ ಅರೋಪಗಳ ಬಗ್ಗೆ ವಿಚಾರಣೆ ನಡೆಸಲು ಇಲ್ಲಿನ ಸಿಬಿಐ ಪೊಲೀಸರು TP ವಾರೆಂಟ್ ಪಡೆದು ಜನಾರ್ದನ ರೆಡ್ಡಿಯನ್ನು ಮಾ. 2ರಂದು ಬೆಂಗಳೂರಿಗೆ ಕರೆ ತಂದಿದ್ದರು. ಸಿಬಿಐ ಪೊಲೀಸರ ವಿಚಾರಣೆ ಬಳಿಕ ರೆಡ್ಡಿ ಮತ್ತು ಅವರ ಆಪ್ತ ಅಲಿಖಾನ್ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ.












Click it and Unblock the Notifications