ಯುವ ಸಮಾವೇಶ, ಬಿಎಸ್ ವೈ ಮಾನ ಹರಾಜು

ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಬೆಂಬಲಿಗರ ದೊಡ್ಡ ಪಡೆಯೇ ವೇದಿಕೆಯ ಹಿಂದೆ ಮುಂದೆ ನಿಂತಿದೆ. ನಿರೀಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಆಪ್ತರು ಯುವ ಜಾಗೃತಿ ಸಮಾವೇಶದಿಂದ ದೂರ ಉಳಿದಿದ್ದಾರೆ.
ಕಳಂಕಿತ ನಾಯಕರ ಫೋಟೊಗಳನ್ನು ಪ್ರಚಾರದಲ್ಲಿ ಬಳಸಲಾಗಿಲ್ಲ. ದೇಶಭಕ್ತರ ಚಿತ್ರಗಳನ್ನು ಮಾತ್ರ ಬಳಸಲಾಗಿದೆ. ಇದು ಉದ್ದೇಶ ಪೂರ್ವಕವಲ್ಲ ಎಂದು ಆಯೋಜನೆಯ ಉಸ್ತುವಾರಿ ಹೊತ್ತಿರುವ ಮಾಜಿ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆ ಯಡಿಯೂರಪ್ಪ ಅವರು ಬರದಿದ್ದ ಕಾರಣ ನನಗೆ ಸೋಲುಂಟಾಯಿತು ಎಂದು ಇದೇ ಸುನಿಲ್ ಕುಮಾರ್ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ವೇದಿಕೆ ಕಾರ್ಯಕ್ರಮ: ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅನುರಾಗ್ ಸಿಂಗ್ ಠಾಕೂರ್ ಅವರು ಮಂಗಳವಾರ(ಮೇ.22)ಸಂಜೆ ಉದ್ಘಾಟಿಸಿದರು. ಇದಕ್ಕೂ ಮುನ್ನ ಜ್ಯೋತಿ ವೃತ್ತದಲ್ಲಿ ಶೋಭಾಯಾತ್ರೆಗೆ ಸಿಎಂ ಡಿವಿ ಸದಾನಂದ ಗೌಡರಿಂದ ಚಾಲನೆ ನೀಡಿದರು.
ಕೆಎಸ್ ಈಶ್ವರಪ್ಪ, ಆರ್ ಅಶೋಕ್, ಸಿಟಿ ರವಿ, ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ, ಸುನಿಲ್ ಕುಮಾರ್ ಕಾರ್ಕಳ, ಸಂಸದ ನಳೀನ್ ಕುಮಾರ್ ಕಟೀಳ್, ನಾರಾಯಣಸ್ವಾಮಿ, ಕೆ ಪದ್ಮನಾಭ ಕೊಟ್ಟಾರಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಜ್ಯದ ವಿವಿಧೆಡೆಗಳಿಂದ ಸುಮಾರು 1 ಲಕ್ಷಕ್ಕೂ ಅಧಿಕ ಯುವ ಮೋರ್ಚಾ ಕಾರ್ಯಕರ್ತರು ಆಗಮಿಸಿದ್ದಾರೆ. ಬೈಕ್ ರ್ಯಾಲಿ, ಶೋಭಾ ಯಾತ್ರೆ ಯಶಸ್ವಿಯಾಗಿದೆ. ನೆಹರೂ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.
ರಾಷ್ಟೀಯ ಭದ್ರತೆ ಈ ಸಮಾವೇಶದ ಮುಖ್ಯ ಚರ್ಚೆಯ ವಿಷಯವಾಗಲಿದೆ. ನಕ್ಸಲ್ ಚಟುವಟಿಕೆಗಳನ್ನು ಹತ್ತಿಕ್ಕಬೇಕು. ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಮಟ್ಟ ಹಾಕುವುದು ಹೇಗೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಾಜಿ ಶಾಸಕ ಸುನಿಲ್ ಕುಮಾರ್ ಕಾರ್ಕಳ ಹೇಳಿದ್ದಾರೆ.












Click it and Unblock the Notifications