ಕೋಟಿ ತುಂಬಿದ ತಿಜೋರಿಗೆ ಕೈಹಾಕಿ ಸಿಕ್ಕಿಬಿದ್ದ
ಆದರೆ, ಪ್ರಜ್ವಲ್ ಮಂಜುನಾಥ್ ಅಂದುಕೊಂಡಂತೆ ಹಣ ಕೈ ಸೇರಿದರೂ ಕೆಲ ಕ್ಷಣಗಳ ನಂತರ ಅದೇ ಕೈಗಳಿಗೆ ಕೋಳ ಬಿದ್ದಿತ್ತು. ಚಿಕ್ಕಮಗಳೂರಿನ ಜಿಲ್ಲೆ ಮೂಡಿಗೆರೆಯ ಗುತ್ತಿ ಗ್ರಾಮದ ಪ್ರಜ್ವಲ್ ಮಾಡಿದ ಯೋಜನೆ ಸಫಲವಾದರೂ ಪೊಲೀಸರ ಚಾಣಾಕ್ಷ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಆರ್ ಟಿನಗರ ಬಳಿಯ ಚೋಳನಾಯಕನಹಳ್ಳಿ ನಿವಾಸಿಯಾಗಿರುವ ಪ್ರಜ್ವಲ್ ಮಂಜುನಾಥ್, ಕ್ಯಾಶಿಯರ್ ಆಗಿ ತನ್ನ ಪಾಡಿಗೆ ತಾನಿದ್ದ. ಆದರೆ, ಪ್ರತಿ ದಿನ ಕಣ್ಮುಂದೆ ಬೀಳುತ್ತಿದ್ದ ಹಣದ ರಾಶಿ ಕಂಡು ಅವನ ತಲೆ ತಿರುಗಿದೆ.
ಡಿಜೆ ಹಳ್ಳಿ ಸಮೀಪದ ಕಾವಲ್ ಭೈರಸಂದ್ರದಲ್ಲಿರುವ ಜನಲಕ್ಷ್ಮಿ ಫೈನಾನ್ಸ್ ಸಂಸ್ಥೆಯ ಭದ್ರತಾ ಲೋಪಗಳನ್ನು ಅರಿತ್ತಿದ್ದ ಪ್ರಜ್ವಲ್ ಮೊದಲಿಗೆ ನಕಲಿ ಕೀಗಳನ್ನು ಮಾಡಿಸಿ ಎತ್ತಿಟ್ಟಿದ್ದ. ಸಮಯ ನೋಡಿಕೊಂಡು ಅಂಗಡಿಗೆ ತೆರಳಿ ಸುಲಭವಾಗಿ ನಕಲಿ ಕೀ ಬಳಸಿ, ಅಂಗಡಿ ಒಳಹೊಕ್ಕು ಮೊದಲಿಗೆ ಸೆಕ್ಯುರಿಟಿ ಅಲಾರಂ ಬಂದ್ ಮಾಡಿಬಿಟ್ಟ ನಂತರ ಬೇಕಾದಷ್ಟು ಹಣ ದೋಚಿ ಹೊರಬಿದ್ದಿದ್ದ.
ಶಿವಾಜಿನಗರದ ಲೇಡಿ ಕರ್ಜನ್ ನ ಲಾಡ್ಜ್ ನಲ್ಲಿ ಒಂದಷ್ಟು ಹಣ ಎತ್ತಿಟ್ಟು.. ಇನ್ನೊಂದಿಷ್ಟು ಹಣವನ್ನು ಬ್ಯಾಗಿಗೆ ತುಂಬಿಕೊಂಡು ತನ್ನೂರಿಗೆ ತೆರಳುತ್ತಾನೆ. ತನ್ನ ಮನೆಯವರಿಗೂ ಗೊತ್ತಾಗಾದ ಹಾಗೆ ಮನೆಯ ಅಟ್ಟದ ಮೇಲೆ ಚಿನ್ನವಿದ್ದ ಬ್ಯಾಗ್ ಅನ್ನು ಇಟ್ಟು ಮತ್ತೆ ಬೆಂಗಳೂರಿನ ಲಾಡ್ಜ್ ಗೆ ಮರಳುತ್ತಾನೆ.
ಊರಿಗೆ ಹೋಗುವುದಾಗಿ ಹೇಳಿ 5 ದಿನ ರಜೆ ತೆಗೆದುಕೊಂಡಿದ್ದ ಪ್ರಜ್ವಲ್, ಕಳ್ಳತನ ನಡೆದ ದಿನ ತಾನು ಊರಲ್ಲಿ ಇರಲಿಲ್ಲ ಎನ್ನುವ ಸಾಕಷ್ಟು ಸಾಕ್ಷಿ ಸೃಷ್ಟಿಸಿದ್ದ. ಆದರೆ, ಪ್ರಕರಣದಲ್ಲಿ ಪ್ರಜ್ವಲ್ ಮೇಲೆ ಶಂಕೆಪಟ್ಟ ಡಿಜೆ ಹಳ್ಳಿ ಠಾಣೆ ಇನ್ಸ್ ಪೆಕ್ಟತ್ ಪರಶಿವಮೂರ್ತಿ ಅವರು ಪ್ರಜ್ವಲ್ ನನ್ನು ಸುಲಭವಾಗಿ ಹಿಡಿದಿದ್ದಾರೆ. ಪ್ರಜ್ವಲ್ ಬಳಿ ಇದ್ದ 3.7 ಕೆಜಿ ಚಿನ್ನ, 89,000 ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜ್ವಲ್ ರಜೆ ಇದ್ದ ದಿನದ ಮೊಬೈಲ್ ಕಾಲ್ ರೆಕಾರ್ಡ್ ಪರಿಶೀಲಿಸಿ ಆತ ಊರಿಗೆ ಹೋಗಿಲ್ಲ ಶಿವಾಜಿನಗರ ಏರಿಯಾದಲ್ಲೇ ಇದ್ದ ಎಂಬುದನ್ನು ಖಚಿತಪಡಿಸಿಕೊಂಡು ಆತನನ್ನ ಬಂಧಿಸಿ ವಿಚಾರಿಸಿದ ಮೇಲೆ ಸತ್ಯ ಹೊರ ಬಿದ್ದಿದೆ. ಇಷ್ಟಕ್ಕೆಲ್ಲ ಜನಲಕ್ಷ್ಮಿ ಫೈನಾನ್ಸ್ ನ ಅಧಿಕಾರಿಗಳ ನಿರ್ಲಕ್ಷ್ಯವೇ ಕೃತ್ಯಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.