ಸದ್ಯಕ್ಕೆ ಯಡಿಯೂರಪ್ಪನವರನ್ನು ಕಾಪಾಡುವವರು ಯಾರು?
ಬೆಂಗಳೂರು, ಮೇ. 16 : ಎಲ್ಲ ಎಂಟು ದಿಕ್ಕುಗಳಿಂದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಅಧಿಕಾರಿಗಳು ಮಾಜಿ ಮುಖ್ಯಮಂತ್ರಿಗಳ ಮೇಲೆ ಮುಗಿಬಿದ್ದಿದ್ದಾರೆ. ಅವರು ಮಾತ್ರವಲ್ಲ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಅವರ ಇಬ್ಬರು ಗಂಡು ಮಕ್ಕಳು, ಅಳಿಯ, ಲಂಚ ನೀಡಿದ ಮೈನಿಂಗ್ ಕಂಪನಿಗಳು ಮೇಲೇಳದಂತೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೆ ಯಡಿಯೂರಪ್ಪನವರ ಆಪ್ತ ಸಚಿವರುಗಳಾದ ಕೃಷ್ಣಯ್ಯ ಶೆಟ್ಟಿ, ಶೋಭಾ ಕರಂದ್ಲಾಜೆ, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ರೇಣುಕಾಚಾರ್ಯ ಮುಂತಾದವರ ನಿವಾಸಗಳ ಮೇಲೆ ದಾಳಿ ಮಾಡಲು ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ. ಯಾರ್ಯಾರ ಮನೆಯಲ್ಲಿ ಯಾವ್ಯಾವ ದಾಖಲೆಗಳು ಸಿಗುತ್ತವೆ ಬಲ್ಲವರಾರು?
ಯಡಿಯೂರಪ್ಪ ಮತ್ತು ಆರೋಪಿ ಸ್ಥಾನದಲ್ಲಿರುವ ಮಕ್ಕಳು, ಅಳಿಯನ ಮನೆಯ ಮೇಲೆ ದಾಳಿ ಮಾಡಿದಾಗ ಸಣ್ಣ ಇರುವೆಯನ್ನೂ ಒಳಹೋಗಲು ಸಿಬಿಐ ಅಧಿಕಾರಿಗಳು ಬಿಟ್ಟಿಲ್ಲ. ಪತ್ರಕರ್ತರು ಗೇಟಿನ ಹೊರಗಡೆಯಿಂದಲೇ ವರದಿ ಮಾಡುತ್ತಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ಮನೆಯ ಮುಂದೆ 'ಸುಸ್ವಾಗತ' ಎಂಬ ಎಂಬ ಬೋರ್ಡ್ ಸ್ವಾಗತಿಸುತ್ತಿದ್ದರೂ ಯಡಿಯೂರಪ್ಪನವರನ್ನು ಭೇಟಿ ಮಾಡಲು ಬಂದ ಆಪ್ತರನ್ನು ಗೇಟಿನಿಂದಲೇ ಗೆಟೌಟ್ ಅನ್ನಲಾಗುತ್ತಿದೆ. ನಮ್ಮ ಮೇಲೆಯೂ ಅನುಮಾನ ಬಂದೀತೆಂದು ಕೆಲ ಆಪ್ತರು ದಾಳಿ ನಡೆಯುತ್ತಿರುವ ಕಡೆ ಸುಳಿಯುತ್ತಿಲ್ಲ.
ಇಂಥ ಸಮಯದಲ್ಲಿ ಯಡಿಯೂರಪ್ಪನವರನ್ನು ಕಾಪಾಡುವವರು ಯಾರು? ಯಡಿಯೂರಪ್ಪನವರಿಂದ ಹಾಡಿ ಹೊಗಳಿಸಿಕೊಂಡ ಸೋನಿಯಾ ಗಾಂಧಿನೆ? ಸೂಕ್ತ ದಾಖಲಾತಿ ಸಿಗದೆ ಕಾನೂನಿನ ಬಿಗಿಮುಷ್ಠಿಯಿಂದ ಅವರೇ ಪಾರಾಗುವರೆ? ಸುಪ್ರೀಂ ಕೋರ್ಟ್ ತನಿಖೆಗೆ ಆದೇಶ ನೀಡಿರುವುದರಿಂದ ಹೈಕೋರ್ಟ್ ಕೂಡ ಸಹಾಯಕ್ಕೆ ಬರಲಾರದು. ಬಿಜೆಪಿ ಹೈಕಮಾಂಡ್ ಕೂಡ ದೂರ ಸರಿದಿದೆ. ಶೋಭಾ ಕರಂದ್ಲಾಜೆ ಅವರು ದೆಹಲಿಯಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದಾರಾದರೂ, ಅವರಿಗೇ ದಾಳಿಯ ಭೀತಿ ಎದುರಾಗಿದೆ.
ಅಕ್ರಮದ ಪ್ರಮಾಣ ಅಧಿಕವಾಗಿರುವುದರಿಂದ ಸಿಬಿಐ ಅಧಿಕಾರಿಗಳು ಯಡಿಯೂರಪ್ಪನವರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯೂ ಇರುವುದರಿಂದ, ಸದ್ಯಕ್ಕೆ ಬಿಎಸ್ವೈ ಅವರನ್ನು ಕಾಪಾಡಲು, ಅವರು ಅಗಾಧವಾಗಿ ನಂಬಿರುವ ದೇವರುಗಳೇ ಬರಬೇಕು. ಸಂಕಟ ಬಂದಾಗಲೆಲ್ಲ ದೇವರ ಪಾದಕ್ಕೆ ಎರಗುವ ಯಡಿಯೂರಪ್ಪನವರನ್ನು ಯಾವ ದೇವರು ಕಾಪಾಡಲಿದ್ದಾನೆ. ದೇವರು ಕೂಡ ಸದ್ಯಕ್ಕೆ ಯಡಿಯೂರಪ್ಪ ಕೈಹಿಡಿಯದಿದ್ದರೆ ಅಪೋಲೋ ಆಸ್ಪತ್ರೆಯ ಹಾಸಿಗೆಯಂತೂ ಇದ್ದೇ ಇದೆ