ಬಿಎಸ್ವೈ ಪ್ರಕರಣ: FIR ದಾಖಲಾಯ್ತು, ಬಂಧನ ?
ಬೆಂಗಳೂರು, ಮೇ 15: ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ಸಿಬಿಐ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಂಗಳವಾರ ಮಧ್ಯಾಹ್ನ FIR ದಾಖಲಿಸಿದ್ದಾರೆ. Mines and Minerals (Development & Regulation) Act-2010 ಮತ್ತು ಭ್ರಷ್ಟಾಚಾರ ತಡೆ ಕಾಯಿದೆ ಪ್ರಕಾರ 120B, 409, 419 ಅಡಿ ಪ್ರಕರಣ ದಾಖಲಾಗಿದ್ದು, ಯಡಿಯೂರಪ್ಪ ಅವರನ್ನು ಆರೋಪಿ ನಂಬರ್ ಒಂದು ( A1) ಎಂದು ಹೆಸರಿಲಾಗಿದೆ.
ಯಡಿಯೂರಪ್ಪ ಅವರ ಇಬ್ಬರು ಪುತ್ರರಾದ ವಿಜಯೇಂದ್ರ(A2), ರಾಘವೇಂದ್ರ (A3), ಅಳಿಯ ಸೋಹನ್ ಕುಮಾರ್ (A4) ಮತ್ತು ಪ್ರವೀಣ್ ಚಂದ್ರ (A5) ಅವರನ್ನು ಸಹ ಆರೋಪಿಗಳೆಂದು FIRನಲ್ಲಿ ದಾಖಲಿಸಲಾಗಿದೆ. ಸೌತ್ ವೆಸ್ಟ್ ಮೈನಿಂಗ್ ಕಂಪನಿ ವಿರುದ್ಧವೂ (A6) ಆರೋಪ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಎಸ್ವೈ, ಪ್ರಸ್ತುತ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿದ್ದಾರೆ.
ಆಗಸ್ಟ್ ಮೊದಲ ವಾರದೊಳಗಾಗಿ ಮೊದಲ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಈಗಾಗಲೇ ಸಿಬಿಐಗೆ ಸೂಚಿಸಿದೆ. ತನಿಖೆಗಾಗಿ ದೆಹಲಿ ಸಿಬಿಐನ ADGP ನೇತೃತ್ವದಲ್ಲಿ ಒಟ್ಟು 9 ಮಂದಿ ಹಿರಿಯ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಹೈದರಾಬಾದ್ ಸಿಬಿಐ JD ಲಕ್ಷ್ಮಿನಾರಾಯಣ ಅವರೂ ತಂಡದಲ್ಲಿದ್ದಾರೆ. ಅಲ್ಲದೆ ತಂಡದಲ್ಲಿ 5 ಮಂದಿ ಇನ್ಸ್ಪೆಕ್ಟರುಗಳೂ ಇದ್ದಾರೆ.
ಈ ಸಂಬಂಧ, ಬೆಂಗಳೂರು ಸಿಬಿಐನ ಭ್ರಷ್ಟಾಚಾರ ವಿರೋಧಿ ಘಟಕದ (ACB) ಡಿಐಜಿ ಆರ್. ಹಿತೇಂದ್ರ ಕುಮಾರ್ ಅವರು ನಿನ್ನೆಯೇ ನವದೆಹಲಿಗೆ ಹೊರಟಿದ್ದರು. ಇಂದು ಮಂಗಳವಾರ, ಸುಪ್ರೀಂಕೋರ್ಟಿನ order copy ಹಿಡಿದು ಬಂದ ಹಿತೇಂದ್ರ ಅವರು ಬೆಂಗಳೂರಿನ ಗಂಗಾನಗರದಲ್ಲಿರುವ ಸಿಬಿಐ ಮುಖ್ಯ ಕಚೇರಿಯಲ್ಲಿ FIR ದಾಖಲಿಸಿಕೊಂಡಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ಸಮೀಪವಿರುವ ಸಿಬಿಐ ವಿಶೇಷ ಕೋರ್ಟಿಗೆ ನಾಳೆ FIR ದಾಖಲಾತಿ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಸುವ ನಿರೀಕ್ಷೆಯಿದೆ.