ಸುದ್ದಿಗೋಷ್ಠಿಯಲ್ಲಿ ಹೆಗ್ಡೆ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಗಣಿ ದೇಣಿಗೆ ಹಾಗೂ ರಾಚೇನಹಳ್ಳಿಯ ಕಾನೂನುಬಾಹಿರ ಡಿನೋಟಿಫಿಕೇಶನ್ ಪ್ರಕರಣಗಳ ಕುರಿತು ಹೆಚ್ಚಿನ ತನಿಖೆ ನಡೆಸಬೇಕೆಂದು ಶುಕ್ರವಾರ, ಮೇ 11ರಂದು ಬೆಳಿಗ್ಗೆ 10 ಗಂಟೆಗೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ್ದರ ಹಿನ್ನೆಲೆಯಲ್ಲಿ, ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಕ್ರಮ ಗಣಿಗಾರಿಕೆ ತಡೆಗಟ್ಟಲು ಹೊಸ ನೀತಿ ತಂದ ಮೊದಲ ಮುಖ್ಯಮಂತ್ರಿ ನಾನಾಗಿದ್ದೆ. ಪ್ರಧಾನಿಯನ್ನು ಭೇಟಿ ಮಾಡಿ ದೇಶದಾದ್ಯಂತ ಅಕ್ರಮ ಗಣಿಗಾರಿಕೆ ತಡೆಗಟ್ಟಬೇಕೆಂದು ಮನವಿ ಕೂಡ ಮಾಡಿದ್ದೆ. ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಗಮನಕ್ಕೂ ತಂದಿದ್ದೆ. ಆದರೆ, ಅವರು ಅಪರಾಧಿ ಸ್ಥಾನದಲ್ಲಿ ತರಲು ಯತ್ನಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. [ಹೆಗ್ಡೆಗೆ ಸಿಕ್ಕ ನೈತಿಕ ಜಯ]
ಆದರೆ, ಇದಕ್ಕೆಲ್ಲ ಎದೆಗುಂದುವ ವ್ಯಕ್ತಿ ನಾನಲ್ಲ. ಸದ್ಯದಲ್ಲೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಅಕ್ರಮ ಗಣಿಗಾರಿಕೆಯಲ್ಲಿ ನನ್ನನ್ನು ಸಿಲುಕಿಸಿದ್ದು, ಜೈಲಿಗೆ ಕಳುಹಿಸಿದ್ದು, ಸಿಬಿಐ ತನಿಖೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ಕಾರ್ಯಕರ್ತರ ಮುಂದೆ ಎಲ್ಲ ಸತ್ಯವನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇನೆ. ಕಾರ್ಯಕರ್ತರು ಸುಪ್ರೀಂ ಕೋರ್ಟ್ ಆದೇಶದಿಂದ ವಿಚಲಿತರಾಗಬಾರದು. ಪ್ರಧಾನಿಯನ್ನು ಕೂಡ ಭೇಟಿ ಮಾಡಿ ದೇಶದಲ್ಲಿ ನಡೆಯುತ್ತಿರುವ ಎಲ್ಲ ಅಕ್ರಮ ಗಣಿಗಾರಿಕೆ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸುವೆ ಎಂದು ಅವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪನವರ ಜೊತೆ ಅವರ ಅನೇಕ ಬೆಂಬಲಿಗರ ಶಾಸಕರು ಹಾಜರಿದ್ದರು. ಮೇಲೆ ತಿಳಿಸಿದಷ್ಟು ಮಾಹಿತಿಯನ್ನು ಮಾತ್ರ ಮಾಧ್ಯಮದೊಡನೆ ಹಂಚಿಕೊಂಡ ಯಡಿಯೂರಪ್ಪನವರು ಪತ್ರಕರ್ತರು ಎಸೆದ ಪ್ರಶ್ನೆಗಳ ಬಾಣಗಳಿಗೆ ಗುರಾಣಿಯೊಡ್ಡಿ ಅಲ್ಲಿಂದ ನುಣುಚಿಕೊಂಡರು. ಸಿಇಸಿ ವರದಿಯಂದೆ ತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್, ಆಗಸ್ಟ್ 3ರೊಳಗೆ ತನಿಖೆ ಮುಗಿಸಿ ವರದಿ ನೀಡುವಂತೆ ಹೇಳಿದೆ.











Click it and Unblock the Notifications