ಸಿಬಿಐ: ಯಡಿಯೂರಪ್ಪ ರಾಜಕೀಯ ಭವಿಷ್ಯ ಅವನತಿಯತ್ತ
ಸುಪ್ರೀಂಕೋರ್ಟಿನ ತೀರ್ಪು ಹೊರಬೀಳುವ ಘಳಿಗೆಯಲ್ಲಿ ಯಡಿಯೂರಪ್ಪ ನಂಜನಗೂಡಿನ ಶ್ರೀಕಂಠೇಶ್ವರ ಸನ್ನಿಧಿಯಲ್ಲಿದ್ದಾರೆ. ಸುಪ್ರೀಂ ತೀರ್ಪನ್ನು ಸ್ವಾಗತಿಸುವುದಾಗಿ ಯಡಿಯೂರಪ್ಪ ಅಲ್ಲಿಂದಲೇ ಪ್ರತಿಕ್ರಿಯಿಸಿದ್ದಾರೆ.
ಇದರೊಂದಿಗೆ ಅರಸೀಕೆರೆಯ ಜೇನುಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿಗೆ ಅಡ್ಡಬಿದ್ದರೂ ಯಡಿಯೂರಪ್ಪನವರ ರಾಜಕೀಯ ಭವಿಷ್ಯ ಈಗ ಜೇನುಕಲ್ಲು ಬೆಟ್ಟದಿಂದ ಜಾರಿ ಪ್ರಪಾತಕ್ಕೆ ಬಿದ್ದಿದೆ. ಮತ್ತೆ ಮುಖ್ಯಮಂತ್ರಿ ಪಟ್ಟ ಬೇಕೇಬೇಕು ಎಂದು ಹಠ ಹಿಡಿದಿದ್ದ ಯಡಿಯೂರಪ್ಪನವರಿಗೆ ಅವರ ರಾಜಕೀಯ ಭವಿಷ್ಯ ಮಸುಕಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಸದ್ಯಕ್ಕೆ ತನಿಖೆ ಎದುರಿಸುವುದೊಂದೇ ಯಡಿಯೂರಪ್ಪ ಎದುರಿಗಿರುವ ಮಾರ್ಗ. ನಿರಪರಾಧಿ ಎಂದು ಸಾಬೀತು ಆದರೆ ಮಾತ್ರ ರಾಜಕೀಯವಾಗಿ ಅವರು ಪುನಸ್ಚೇತಗೊಳ್ಳಬಹುದು ಎಂದು ಕಾನೂನು ಪಂಡಿತರು ವ್ಯಾಖ್ಯಾನಿಸಿದ್ದಾರೆ.
ಈ ಮಧ್ಯೆ, ಯಡಿಯೂರಪ್ಪ ವಿರೋಧಿಗಳು ತೀರ್ಪಿನಿಂದ ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಜಕೀಯವಾಗಿ ಅವರನ್ನು ಹಣಿಯಲು ದಿವ್ಯಸ್ತ್ರ ದೊರೆತಿದೆ. ಬಿಜೆಪಿ ಹೈಕಮಾಂಡಿಗಂತೂ ಸಖತ್ ನಿರಾಳವಾಗಿದೆ. ಇನ್ನು ರಾಜ್ಯದಲ್ಲಿ ಸಿಎಂ ಸದಾನಂದ ಗೌಡ ಮತ್ತು ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರಿಗೆ ದೊಡ್ಡ ತಲೆನೋವು ಮಾಯವಾಗಿದೆ.