ಎಟಿಎಂನಲ್ಲಿ ಹಣ ಕಳೆದುಕೊಂಡ ಟೆಕ್ಕಿ ವೆಂಕಟನ ಸಂಕಟ

ಬೆಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಟೆಕ್ಕಿ ವೆಂಕಟ ಮಂಥ ಅವರು ಎಸ್ಬಿಐ ಡೆಬಿಟ್ ಕಾರ್ಡ್ ಬಳಸಿ ಕೆಥೆಡ್ರಲ್ ರಸ್ತೆಯಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂಗೆ ಹೋಗಿದ್ದಾರೆ. ಕಾರ್ಡ್ ಬಳಸಿ 20 ಸಾವಿರ ರು. ಹಿಂತೆಗೆದುಕೊಳ್ಳಲು ಯತ್ನಿಸಿದಾಗ ಹಿಂದಕ್ಕೆ ಬಂದಿದ್ದು ಕಾರ್ಡು ಮಾತ್ರ, ದುಡ್ಡು ಮಂಗಮಾಯ. ಆದರೆ, ಖಾತೆಯಿಂದ 20 ಸಾವಿರ ರು. ಛೂಮಂತ್ರವಾಗಿತ್ತು.
ಅದೇ ಎಟಿಎಂನಲ್ಲಿ ಬೇರೆ ಕಾರ್ಡ್ ಬಳಸಿ ಹಣ ವಾಪಸ್ ತೆಗೆದರೆ ಅದು ಅವರಿಗೆ ಸಿಕ್ಕಿದೆ. ಅಲ್ಲಿಂದ ಶುರುವಾಗಿದೆ ಕಳೆದುಕೊಂಡ ಹಣವನ್ನು ಪಡೆಯುವ ಅಭಿಯಾನ. ಎಚ್ಡಿಎಫ್ಸಿ ಬ್ಯಾಂಕಿಗೆ ಹಣ ಸಿಗದಿರುವುದರ ಬಗ್ಗೆ ಪತ್ರ ಬರೆದಿದ್ದಾರೆ. ಹಾಗೆಯೆ, ಬೆಂಗಳೂರಿನ ಎಸ್ಬಿಐಗೂ ಪತ್ರ ರವಾನಿಸಿದ್ದಾರೆ. ಆದರೆ, ಯಾವ ಬ್ಯಾಂಕಿನಿಂದಲೂ ಅವರಿಗೆ ಸಹಾಯ ದೊರೆತಿಲ್ಲ.
ವೆಂಕಟ ಮಂಥ ಅವರ ಹೆಂಡತಿ ಸೌಜನ್ಯ ಎರಡೂ ಬ್ಯಾಂಕುಗಳಿಗೆ ಬರೆದಿರುವ ಪತ್ರ ಸಿಕ್ಕ ಉತ್ತರವೇನೆಂದರೆ, ಬ್ಯಾಂಕ್ ಓಂಬುಡ್ಸ್ಮನ್ನನ್ನು ಸಂಪರ್ಕಿಸಬೇಕೆಂದು. ಹಣ ಖಾತೆಯಿಂದ ಕಡಿತಗೊಂಡಿದನ್ನು ಎರಡೂ ಬ್ಯಾಂಕುಗಳು ಒಪ್ಪಿಕೊಂಡಿದ್ದರೂ ಹಣ ಹಿಂತಿರುಗಿಸಲು ಹಿಂದೇಟು ಹಾಕುತ್ತಿವೆ ಎಂದು ವೆಂಕಟ ಅವರ ಪತ್ನಿ ಸೌಜನ್ಯ ಅಲವತ್ತುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರಿನಲ್ಲಿ ಎಸ್ಬಿಐ ಚೀಫ್ ಮ್ಯಾನೇಜರ್ ಆರ್.ಎನ್. ಕುಲಕರ್ಣಿ ಅವರು, ಓಂಬುಡ್ಸ್ಮನ್ರಿಂದ ದೂರಿನ ಪ್ರತಿ ಬಂದಿದ್ದು, ತನಿಖೆ ನಡೆಸಿದ ನಂತರ ವರದಿಯನ್ನು ಓಂಬುಡ್ಸ್ಮನ್ ಅವರಿಗೆ ನೀಡಲಾಗುವುದು. ಅವರು ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಇದು ವೆಂಕಟ ಅವರ ಸಂಕಟದ ಕಥೆ ಮಾತ್ರವಲ್ಲ. ಪ್ರತಿದಿನ ಹಣ ಹಿಂತೆಗೆದುಕೊಳ್ಳಲು ಎಟಿಎಂಗಳಿಗೆ ಎಡತಾಕುವ ಲಕ್ಷಾಂತರ ಗ್ರಾಹಕರ ಕಥೆ. ಎಟಿಎಂನಲ್ಲಿ ಹಣ ಕಳೆದುಕೊಂಡವರೆಷ್ಟೋ, ಎಂಟಿಎಂ ಕಾರ್ಡನ್ನೂ ಕಳೆದುಕೊಂಡವರೆಷ್ಟೋ? ಎಂಟಿಎಂ ಇದ್ದಿದ್ದರಿಂದ ಬ್ಯಾಂಕಿನೊಂದಿಗೆ ವ್ಯವಹಾರ ನಡೆಸುವುದು ಸುಲಭವೇನೋ ಆಗಿದೆ. ಆದರೆ, ಅದರ ಜೊತೆ ನಾನಾ ಸಂಕಷ್ಟಗಳನ್ನೂ ಎದುರಿಸಬೇಕಾಗಿದೆ.












Click it and Unblock the Notifications