ಮುಖರ್ಜಿಗೆ ಡಿಎಂಕೆ ಬೆಂಬಲ, ಪ್ಯಾಕೇಜ್ ಡೀಲ್?
ಮೊದಲಿಗೆ ಮಹಿಳಾ ಅಭ್ಯರ್ಥಿಗೆ ಮಾತ್ರ ಬೆಂಬಲ ಎನ್ನುತ್ತಿದ್ದ ಡಿಎಂಕೆ, ನಂತರ ಮುಸ್ಲಿಂ ಅಭ್ಯರ್ಥಿ ಪರ ನಿಂತು ಅನ್ಸಾರಿ ಅವರನ್ನು ರಾಷ್ಟ್ರಪತಿ ಮಾಡಲು ಹೊರಟಿತ್ತು. ಆದರೆ, ಈಗ ತಮ್ಮ ರಾಜ್ಯದ ಸಮರ್ಥ ಅಭ್ಯರ್ಥಿ ಅಬ್ದುಲ್ ಕಲಾಂ ಪರ ನಿಲ್ಲದೆ ಪ್ರಣಬ್ ಮುಖರ್ಜಿ ಪರ ನಿಂತಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.
ಕಳೆದ ವಾರದವರೆಗೂ ಕಲಾಂ ಪರ ಇದ್ದ ಅಲೆಯನ್ನು ಪ್ರಣಬ್ ಪರ ತಿರುಗುವಂತೆ ಮಾಡಿದ್ದು ಮಮತಾ ಬ್ಯಾನರ್ಜಿ ಎಂಬುದನ್ನು ಮರೆಯುವಂತಿಲ್ಲ. ಸಮಾಜವಾದಿ ಪಕ್ಷದ ಮುಲಾಯಂ ಅವರನ್ನು ಕೂಡಾ ಪ್ರಣಬ್ ಪರ ನಿಲ್ಲುವಂತೆ ಮಮತಾ ಮಾಡಿದ್ದಾರೆ. ಬಹುಶಃ ಮುಂದಿನ ಟಾರ್ಗೆಟ್ ಎಐಎಡಿಎಂಕೆ ಜಯಲಲಿತಾ ಇರಬಹುದು. ಆದರೆ, ಡಿಎಂಕೆ ಬೆಂಬಲ ಕೊಟ್ಟ ಅಭ್ಯರ್ಥಿಗೆ ಎಐಎಡಿಎಂಕೆ ಪಕ್ಷ ಅಷ್ಟು ಸುಲಭವಾಗಿ ಬೆಂಬಲ ನೀಡುವುದೇ ಕಾದು ನೋಡಬೇಕಿದೆ.
ಮಮತಾ ಯೋಜನೆ: ಪ್ರಣಬ್ ಪರ ಅಲೆ ಸೃಷ್ಟಿಸಿದ ಮಮತಾ ನಿಧಾನವಾಗಿ ಪಶ್ಚಿಮ ಬಂಗಾಳ ರಾಜ್ಯಕ್ಕೆ ಅನುದಾನ ರೂಪದಲ್ಲಿ ಕೇಂದ್ರ ಸರ್ಕಾರದಿಂದ ಬರಬೇಕಿರುವ 54,300 ಕೋಟಿ ರು ಪರಿಹಾರ ಪ್ಯಾಕೇಜ್ ಆದಷ್ಟು ಬೇಗ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಮಮತಾ ಅವರ ಬೇಡಿಕೆ ಯುಪಿಎ ಒಪ್ಪದೆ ಇರಲು ಸಾಧ್ಯವೇ ಇಲ್ಲ. ಆದರೆ, ಈ ಬಗ್ಗೆ ಸೋನಿಯಾಜಿ ಆಗಲಿ ಮನಮೋಹನ್ ಸಿಂಗ್ ಆಗಲಿ ಯಾವುದೇ ಭರವಸೆ ನೀಡಿಲ್ಲ.
ಹೀಗಾಗಿ ರಾಷ್ಟ್ರಪತಿ ಅಭ್ಯರ್ಥಿ ಬೆಂಬಲದ ಬಗ್ಗೆ ಮಮತಾ ಅವರ ನಿಲುವು ಕೊನೆ ಕ್ಷಣದಲ್ಲಿ ಬದಲಾದರೂ ಅಚ್ಚರಿ ಏನಿಲ್ಲ. ಆದರೆ, ತಮಿಳುನಾಡಿನ ಡಿಎಂಕೆ ಪಕ್ಷ ತನ್ನ ನಿಲುವು ಬದಲಿಸಲು ಯಾವ ಕಾಣಿಕೆ ಕೇಳಿದೆ ಗೊತ್ತಿಲ್ಲ. ಡಿಎಂಕೆ ಸದ್ಯಕ್ಕಿರುವ ಸಮಸ್ಯೆ ಎಂದರೆ, ಕರುಣಾನಿಧಿ ಕುಟುಂಬದ ಮೇಲಿರುವ ಕೋರ್ಟ್ ಕೇಸುಗಳು. ಇದನ್ನು ಆದಷ್ಟು ಬೇಗ ಮುಗಿಸುವಂತೆ ಅಥವಾ ಪ್ರಕರಣಗಳಿಂದ ಮುಕ್ತಿ ಕೊಡಿಸುವಂತೆ ಸೋನಿಯಾ 'ಅಮ್ಮ' ಅವರಲ್ಲಿ 'ಕರುಣಾ'ನಿಧಿ ಬೇಡಿಕೆ ಸಲ್ಲಿಸಿರುವ ಎಲ್ಲಾ ಸಾಧ್ಯತೆಗಳಿದೆ.
ಉಳಿದಂತೆ ಪ್ರಣಬ್ ಅವರಿಗೆ ಎನ್ ಸಿಪಿ ಶರದ್ ಪವಾರ್, ಲೋಕದಳ ಅಜಿತ್ ಸಿಂಗ್ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಯುಪಿಎ ಮಿತ್ರಪಕ್ಷಗಳು ಬಹುತೇಕ ಪ್ರಣಬ್ ಮುಖರ್ಜಿ ಅವರನ್ನು ರಾಷ್ಟ್ರಪತಿಯಾಗಿ ಕಾಣುವ ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಗಿದೆ.