ಗಂಡು ಗಂಡನಲ್ಲ, ಹೆಂಡತಿ ಹೆಂಡತಿಯಲ್ಲ, ಇದೆಂಥ ಮದುವೆ?
ನಡೆದದ್ದೇನೆಂದರೆ, ಮದುವೆಯಾಗಬೇಕಿದ್ದ ಗಂಡು ಸಕಾಲದಲ್ಲಿ ದುಬೈನಿಂದ ಭಾರತಕ್ಕೆ ಬರಲು ವಿಫಲವಾಗಿದ್ದರಿಂದ, ಮುಹೂರ್ತಕ್ಕೆ ಸರಿಯಾಗಿ ಈ ಮದುಮಗನ ತಂಗಿಯೇ ಅಣ್ಣ ಮದುವೆಯಾಗಬೇಕಿದ್ದ ವಧುವಿಗೆ ತಾಳಿ ಕಟ್ಟುತ್ತಾಳೆ. ತಾಳಿ ಕಟ್ಟದಿದ್ದರೂ ಗಂಡು ಹೆಣ್ಣು ಗಂಡ ಹೆಂಡತಿಯಾಗಿದ್ದಾರೆ. ಭಾರತೀಯ ಮದುವೆ ಕಾಯ್ದೆ ಇದಕ್ಕೆ ಏನು ಹೇಳುತ್ತದೆ? ನೀವು ಇದಕ್ಕೇನಂತೀರಿ?
ಮದುವೆ ನಡೆಯಬೇಕಾಗಿದ್ದುದು ಕೇರಳದ ಅಲೆಪ್ಪಿಯಲ್ಲಿ, ಮೇ 3ರಂದು. ಹಸೆಮಣೆಯೇರಲು ಸನ್ನದ್ಧನಾಗಿ ಏರ್ಪೋರ್ಟ್ ತಲುಪಿದ್ದ ಮದುಮಗ ಕಮಲೇಶ್ ಚಂದ್ರನ್(26)ಗೆ ಕಿಡಿಗೇಡಿ ಲೇಡಿ ಬಾಸ್ ಪಾಸ್ಪೋರ್ಟ್ ತಲುಪಿಸದಿದ್ದ ಕಾರಣ ಭಾರತ ತಲುಪಲಾಗಲಿಲ್ಲ. ಆಗ ಪ್ಲಾನ್ ಮಾಡಿದ ಆತನ ತಂಗಿ ಕವಿತಾ, ಅಣ್ಣನ ಅನುಮತಿ ಪಡೆದು ಆತ ಮದುವೆಯಾಗಬೇಕಿದ್ದ 20 ವರ್ಷದ ಶಾರಿ ಕೃಷ್ಣಾಳಿಗೆ ಮಂಗಳಸೂತ್ರ ಕಟ್ಟಿದ್ದಾಳೆ.
ಎರಡೂ ಕಡೆಯಲ್ಲಿನ ಕೆಲ ಸಂಪ್ರದಾಯವಾದಿಗಳು ಈ ಮದುವೆಗೆ ವಿರೋಧಿಸಿದ್ದಾರೆ. ಆದರೆ, ಸಂಪ್ರದಾಯವಾದಿಗಳ ಪ್ರತಿಭಟನೆಯನ್ನು ಧಿಕ್ಕರಿಸಿ ಕವಿತಾ ಶಾರಿಗೆ ತಾಳಿ ಕಟ್ಟಿದ್ದಾಳೆ. ಕಾನೂನು ತಜ್ಞರು ಇದು ಮದುವೆಯೇ ಅಲ್ಲ ಎಂದು ವಾದಿಸಿದ್ದಾರೆ. ಕಾಯ್ದೆಯ ಪ್ರಕಾರ, ಗಂಡು ಮತ್ತು ಹೆಣ್ಣು ಭೌತಿಕವಾಗಿ ಉಪಸ್ಥಿತರಿರಬೇಕು ಮತ್ತು ಸ್ವತಃ ತಾಳಿ ಕಟ್ಟಿದ ಮೇಲೆ ಅಗ್ನಿಸಾಕ್ಷಿಯಾಗಿ ವಧುವನ್ನು ವರಿಸಬೇಕು. ಮತ್ತು ಮದುವೆ ನೊಂದಾವಣಿ ಪತ್ರಕ್ಕೆ ಸಹಿಯನ್ನೂ ಮಾಡಬೇಕು.
ಈ ಮದುವೆಯನ್ನು ಬೆಂಬಲಿಸುತ್ತಿರುವ ಕೆಲವರು ಹೇಳುತ್ತಿರುವುದೇನೆಂದರೆ, ತಾಳಿ ಕಟ್ಟುವ ಶುಭವೇಳೆ ಉದ್ವೇಗದಿಂದಾಗಿ ಗಂಡಿನ ಕೈಗಳು ಕಂಪಿಸುವುದರಿಂದ ಆತನ ಸಹೋದರಿ ತಾಳಿ ಕಟ್ಟಲು ಸಹಾಯ ಮಾಡುವ ಸಂಪ್ರದಾಯವೂ ಇದೆಯಂತೆ. ಒಪ್ಪುವಂಥ ಮಾತಾ?
ಕಮಲೇಶ್ ಈಗ ಪಾಕಿಸ್ತಾನ ಮೂಲದ ಲೇಡಿ ಬಾಸ್ ವಿರುದ್ಧ ದೂರು ನೀಡಿದ್ದಾನೆ. ಆಕೆಯಿಂದ ಪಾಸ್ಪೋರ್ಟ್ ಪಡೆದು, ಹೊಸ ಟಿಕೆಟ್ ಖರೀದಿಸಿ ಭಾರತಕ್ಕೆ ಬರಲು ಉತ್ಸುಕನಾಗಿದ್ದಾನೆ. ಆತನ 'ಹೆಂಡತಿ' ಶಾರಿ ಈ ಎಲ್ಲ ಹಗರಣಗಳಿಂದ ಬೇಸರ ವ್ಯಕ್ತಪಡಿಸಿದ್ದರೂ, ಭವಿಷ್ಯತ್ತನ್ನು ಗಮನದಲ್ಲಿರಿಸಿಕೊಂಡು 'ಗಂಡ'ನ ಆಗಮನಕ್ಕಾಗಿ ಮತ್ತು ಮಧುಚಂದ್ರಕ್ಕೆ ತೆರಳಲು ಕಾತುರದಿಂದ ಕಾದಿದ್ದಾಳೆ.