ಮೈಸೂರು ಬಳಿ ಯಮವೇಗದ ಬಸ್ಸಿಗೆ ಬಾಲಕ ಬಲಿ

ಮೃತನನ್ನು ನಾಲ್ಕು ವರ್ಷದ ಜೀವನ್ ಎಂದು ಗುರುತಿಸಲಾಗಿದೆ. ಆತ ಕೂಲಿ ಕಾರ್ಮಿಕರಾಗಿರುವ ಭೈರ ಮತ್ತು ರಾಜಮ್ಮ ಅವರ ಏಕೈಕ ಮಗ. ಮನೆಯ ಮುಂದಿರುವ ಅಂಗಡಿಯಿಂದ ಮರಳುತ್ತಿದ್ದಾಗ ಮಂಡ್ಯಕ್ಕೆ ತೆರಳುತ್ತಿದ್ದ 'ಗಜಾನನ' ಹೆಸರಿನ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತನಾಗಿದ್ದಾನೆ.
ಅಪಘಾತವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಾವಿರಾರು ಗ್ರಾಮಸ್ಥರು ಚಾಲಕ ಪ್ರಮೋದ್ ಎಂಬಾತನನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಬಸ್ಸಿನಗ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿ ಬೆಂಕಿ ಹಚ್ಚಲು ಕೂಡ ಯತ್ನಿಸಿದರು. ಆದರೆ, ಪೊಲೀಸರ ಆಗಮನದಿಂದ ಬೆಂಕಿ ಹಚ್ಚಲು ಸಾಧ್ಯವಾಗಿಲ್ಲ.
ರೊಚ್ಚಿಗೆದ್ದಿದ್ದ ಗ್ರಾಮಸ್ಥರಿಂದ ರಸ್ತೆ ತಡೆ ಮಾಡಿದ್ದರಿಂದ 1 ಗಂಟೆಯ ಕಾಲ ಮೈಸೂರು ಮತ್ತು ಮಂಡ್ಯ ನಡುವೆ ರಸ್ತೆ ದಟ್ಟಣೆ ಉಂಟಾಗಿತ್ತು. ಈ ರಸ್ತೆಯಲ್ಲಿ ಖಾಸಗಿ ಬಸ್ಸುಗಳು ಯದ್ವಾತದ್ವಾ ಓಡಿಸುತ್ತಿರುವುದರಿಂದಲೇ ಅಪಘಾತಗಳಾಗುತ್ತಿರುವುದು ಎಂದು ಹಳ್ಳಿಗರು ದೂರಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸರು ಚಾಲಕನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.












Click it and Unblock the Notifications