ಸಿಹಿ ಸುದ್ದಿಗಾಗಿ: ಜೇನ್ಕಲ್ ಗುಡ್ಡದಲ್ಲಿ ಯಡ್ಡಿ ಪ್ರಾರ್ಥನೆ
ನನ್ನವರು ಯಾರೂ ಇಲ್ಲ.. ಯಾರಿಗೆ ಯಾರೂ ಇಲ್ಲ ಎಂಬ ಹಾಡಿನ ಧಾಟಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಿದ ನನ್ನನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಜೈಲಿಗೆ ಕಳುಹಿಸಲಾಯಿತು. ನಮ್ಮವರೇ ನನಗೆ ಶತ್ರುಗಳಾದರು. ಆದರೆ, ನಾನು ಸೋಲುವುದಿಲ್ಲ. ವಿರೋಧಿಗಳಿಗೂ ನನ್ನ ಬೆಲೆ ಗೊತ್ತಾಗುವಂತೆ ಮಾಡುತ್ತೇನೆ ಎಂದಿದ್ದಾರೆ.
ಯಡಿಯೂರಪ್ಪ ಅವರು ಮಾಡಿರುವ ಅಕ್ರಮಗಳು, ತೆಗೆದುಕೊಂಡಿರುವ ಲಂಚದ ಬಗ್ಗೆ ಸೂಕ್ತ ತನಿಖೆ ನಡೆಸಲು ಸಿಬಿಐ ಮಟ್ಟದ ಸಂಸ್ಥೆಯೇ ಸೂಕ್ತ ಎಂದು ಸಿಇಸಿ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಮಹತ್ವ ಪಡೆದಿದೆ.
ಕೋರ್ಟ್ ಕೇಸ್ ಮುಗಿಸಿಕೊಳ್ಳುವವರೆಗೂ ಯಾವುದೇ ಸ್ಥಾನ ಮಾನ ಇಲ್ಲ ಎಂದು ಹೈಕಮಾಂಡ್ ಕೈ ಚೆಲ್ಲಿದೆ. ನಿತಿನ್ ಗಡ್ಕರಿ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತ ಸದಾನಂದ ಗೌಡರು ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯಲ್ಲಿದ್ದಾರೆ. ಸಿಟಿ ರವಿ ಸೇರಿದಂತೆ ಪಕ್ಷದ ನಿಷ್ಠರು ಹೊಸ ಆಟ ಆರಂಭಿಸಿದ್ದಾರೆ.
ಹೀಗಾಗಿ ಯಡಿಯೂರಪ್ಪ ಅವರು ಯಾರೂ ಬೇಡ ಎಂದು ದೇವರ ಮೊರೆ ಹೊಕ್ಕಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟ, ತುಮಕೂರಿನ ಶನೈಶ್ಚರ ದೇಗುಲ, ಬೆಂಗಳೂರಿನ ಪ್ರಮುಖ ದೇಗುಲಗಳನ್ನು ಭೇಟಿ ನೀಡಿರುವ ಯಡಿಯೂರಪ್ಪ ಅವರು ಅರಸೀಕೆರೆ ತಾಲೂಕಿನ ಜೇನುಕಲ್ ಗುಡ್ಡದ ಸಿದ್ದೇಶ್ವರಸ್ವಾಮಿ ಪಾದಕ್ಕೆ ಅಡ್ಡಬಿದ್ದಿದ್ದಾರೆ. ಶುಕ್ರವಾರ ಯಡಿಯೂರಪ್ಪ ಅವರಿಗೆ ನಿರ್ಣಾಯಕವಾಗಲಿದೆಯೇ? ಕಾದು ನೋಡೋಣ...