ಕಾಲೆಳೆದ ಅನಂತುಗೆ ಯಡಿಯೂರಪ್ಪ ತಿರುಗೇಟು
ರಾಜಧಾನಿಯಲ್ಲಿ ಬಸವ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪನವರು ತಮ್ಮ ವಿರೋಧಿಗಳ ವಿರುದ್ಧ ತೀವ್ರ ಟೀಕಾಪ್ರಹಾರ ಮಾಡಿದರು. ವೀರಶೈವನಾಗಿ ಹುಟ್ಟಿದ್ದೇ ನನ್ನ ತಪ್ಪಾ? ಎಂದು ವಾಗ್ದಾಳಿ ಆರಂಭಿಸಿದ ಯಡಿಯೂರಪ್ಪನವರು ಪದೇಪದೆ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ತಮ್ಮ ನೋವು ತೋಡಿಕೊಂಡರು.
ಗಮನಾರ್ಹವೆಂದರೆ ನಾಡಿನ ಹಾಲಿ ಮತ್ತು ಮಾಜಿ ದೊರೆಗಳಿಬ್ಬರೂ ಇದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಆದರೆ ಅವರಿಬ್ಬರ ಮಧ್ಯೆ ಸಚಿವ ಸೋಮಣ್ಣ ಆಸೀನರಾಗಿದ್ದು ವಿಶೇಷವಾಗಿತ್ತು. ಯಡಿಯೂರಪ್ಪ ಮತ್ತು ಸದಾನಂದ ಗೌಡರು ಅಪ್ಪಿತಪ್ಪಿಯೂ ಕಣ್ಣು ಮಿಲಾಯಿಸಲಿಲ್ಲ. ಮಾತೂ ಆಡಲಿಲ್ಲ.
ಫ್ಲ್ಯಾಷ್ ಬ್ಯಾಕ್: ಬಿಜೆಪಿ ಭ್ರಷ್ಟಾಚಾರವನ್ನು ಬಲವಾಗಿ ವಿರೋಧಿಸುತ್ತದೆ. ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಮುಖಂಡರಿಗೆ ದೋಷಮುಕ್ತರಾಗುವವರೆಗೂ ಪಕ್ಷದಲ್ಲಿ ಸ್ಥಾನಮಾನ ನೀಡಿದ ಉದಾಹರಣೆಗಳಿಲ್ಲ. ನೀಡುವುದೂ ಇಲ್ಲ ಎಂದು ಅನಂತಕುಮಾರ್ ಭಾನುವಾರ ಹುಬ್ಬಳ್ಳಿಯಲ್ಲಿ ಸ್ಪಷ್ಟಪಡಿಸಿದ್ದರು.
ಇದನ್ನೇ ನೆಪವಾಗಿಸಿಕೊಂಡ ಯಡಿಯೂರಪ್ಪನವರು ಅನಂತ ಕುಮಾರ್ ಅಥವಾ ಮತ್ಯಾರ ಹೆಸರನ್ನೂ ಪ್ರಸ್ತಾಪಿಸದೇ 'ನನ್ನನ್ನು ಪದೇಪದೆ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಯತ್ನಗಳು ನಡೆಯುತ್ತಿವೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ನನಗೆ ಮನವರಿಕೆಯಾಗಿದೆ. ಕಾಲ ಬಂದಾಗ ಎಲ್ಲವನ್ನೂ ಹೇಳುವೆ' ಎಂದು ಗುಡುಗಿದರು.
ನಾನು ಮಾಡದ ತಪ್ಪಿಗೆ ಶಿಕ್ಷೆ ವಿಧಿಸುತ್ತಿದ್ದಾರೆ. ಆದರೆ ನ್ಯಾಯಾಂಗದಲ್ಲಿ ನನಗೆ ಅಪಾರವಾದ ನಂಬಿಕೆಯಿದೆ. ಖಂಡಿತ ನಿರಪರಾಧಿಯಾಗಿ ಹೊರಬರುವೆ ಎಂದು ಅವರು ತುಂಬು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಅಪರಾಧಿ ನಾಯಕರುಗಳು ಪಕ್ಷದಲ್ಲಿಲ್ಲ: ಈ ಮಧ್ಯೆ, ಮಂಗಳೂರಿನಲ್ಲಿ ಮಾತನಾಡಿರುವ ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ತಮ್ಮ ಪುರಾತನ ಗೆಳೆಯನ ನೆರವಿಗೆ ಧಾವಿಸಿದ್ದಾರೆ. ಶಿಕ್ಷೆಗೊಳಗಾದವರು ಯಾರೂ ಪಕ್ಷದ ರಾಜ್ಯ ಘಟಕದಲ್ಲಿ ಇಲ್ಲ. ಕೋರ್ಟಿನಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ ಅಂದ ಮಾತ್ರಕ್ಕೆ ಅಂತಹವರನ್ನು ತಪ್ಪಿತಸ್ಥರು ಎಂದು ಘೋಷಿಸುವುದು ಸರಿಯಲ್ಲ ಎಂದು ಅನಂತ ಕುಮಾರ್ ನೀಡಿದ್ದ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.