ಯಡಿಯೂರಪ್ಪ ದೂರುದಾರರ ವಂಶ ನಾಶವಾಗಲಿ
ಆದರೆ ಈ ಸಂದರ್ಭದಲ್ಲಿ ಯಾಗದ ನೇತೃತ್ವ ವಹಿಸಿದ್ದ ಶ್ರೀ ಕ್ಷೇತ್ರ ಕಾಳಿಕಾಶ್ರಮದ ಯೋಗೀಶ್ವರ ಋಷಿಕುಮಾರ ಸ್ವಾಮೀಜಿ ಅವರು ವಿವಾದಾತ್ಮಕ ಹೇಳಿಕೆ ನೀಡಿ, ಪ್ರಗತಿಪರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲ, ಇನ್ನು 48 ದಿನಗಳಲ್ಲಿ ತಮ್ಮ ಈ ಯಾಗದ ಮಹಿಮೆ ಗೋಚರವಾಗಲಿದೆ. ಅಂದರೆ 48 ದಿನಗಳಲ್ಲಿ ಯಡಿಯೂರಪ್ಪ ಆರೋಪಮುಕ್ತರಾಗುತ್ತಾರೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.
ಕಳೆದ ಜುಲೈನಲ್ಲಿ ಅಧಿಕಾರ ವಂಚಿತರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಕ್ರಮ ಗಣಿಗಾರಿಕೆ ಕಿಕ್ ಬ್ಯಾಕ್ ಸೇರಿದಂತೆ ನಾನಾ ಪ್ರಕರಣಗಳಲ್ಲಿ ಸಿಲುಕಿಸುತ್ತಿರುವ ದೂರುದಾರರ ವಂಶ ನಿರ್ವಂಶವಾಗಲಿ ಎಂದು ಯೋಗೀಶ್ವರ ಋಷಿಕುಮಾರ ಸ್ವಾಮೀಜಿ ಹೇಳಿದ್ದಾರೆ. ಒಂದು ವೇಳೆ, ಯಡಿಯೂರಪ್ಪ ಅವರು ನಿಜಕ್ಕೂ ಅಕ್ರಮವೆಸಗಿದ್ದರೆ ಅವರಿಗೆ ನೂರ್ಪಟ್ಟು ಶಿಕ್ಷೆಯಾಗಲಿ ಎಂದೂ ಸ್ವಾಮೀಜಿ ಆಶಿಸಿದ್ದಾರೆ.
ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಆತಂಕದಲ್ಲಿ ವಿರೋಧಪಕ್ಷದವರು ಮತ್ತು ಅವರ ವಿರೋಧಿಗಳು ತೇಜೋವಧೆಗೆ ಹರಸಾಹಸ ಪಡುತ್ತಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದರು. ಯಡಿಯೂರಪ್ಪ ಮತ್ತು ಮೈಷುಗರ್ಸ್ ಅಧ್ಯಕ್ಷ ನಾಗರಾಜಪ್ಪ ಅಭಿಮಾನಿಗಳ ಸೇವಾಸಂಘ ಹಾಗೂ ಅವರ ಕುಟುಂಬ ವರ್ಗ ಹೊಸಹಳ್ಳಿ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಯಾಗ ನಡೆಸಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ ರಾಜೇಶ್, ಅವರ ಪತ್ನಿ ಜಗದಂಬ, ಮಕ್ಕಳಾದ ಚಂದನ್ ರಾಜ್ ಹಾಗೂ ಕರಣ್ ರಾಜ್ ಯಾಗದಲ್ಲಿ ಪಾಲ್ಗೊಂಡಿದ್ದರು. ತುಮಕೂರು ಸಿದ್ದಗಂಗಾ ಮಠ, ಬಾಗಲಕೋಟದ ಕೂಡಲಸಂಗಮ ಮತ್ತು ಬೂಕನಕೆರೆಯಿಂದ ತಂದಿದ್ದ ಪವಿತ್ರ ಮರಳನ್ನು ಯಾಗದಲ್ಲಿ ಬಳಸಲಾಯಿತು.