ರಿಜಿಸ್ಟ್ರಾರ್ ಮೇಲೂರು ಮೈಲಾರಪ್ಪ ಎತ್ತಂಗಡಿ?
ಕಳೆದ ಆರೆಂಟು ತಿಂಗಳಿಂದ ವಿವಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಶಿಕ್ಷಣ ವ್ಯವಸ್ಥೆಗೇ ಕಳಂಕ ತರುತ್ತಿರುವಾಗ ಕೈಕಟ್ಟಿ ಕುಳಿತುಕೊಳ್ಳಲಾಗದು. 'ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು' ಎಂಬಂತೆ ವಿವಿಯ ಈ ಇಬ್ಬರೂ ಮಹನೀಯರು ವರ್ತಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ತಕ್ಷಣಕ್ಕೆ ರಿಜಿಸ್ಟ್ರಾರ್ ಮೇಲೂರು ಮೈಲಾರಪ್ಪ ಅವರನ್ನು ಎತ್ತಂಗಡಿ ಮಾಡುವುದು. ಮತ್ತು ಸಮಯಾವಕಾಶ ನೋಡಿಕೊಂಡು ರಾಜ್ಯಪಾಲರ ಅನುಮೋದನೆ ಗಿಟ್ಟಿಸಿ ವೈಸ್ ಚಾನ್ಸಲರ್ ಪ್ರಭುದೇವ ಅವರನ್ನೂ ಅಲ್ಲಿಂದ ಎಬ್ಬಿಸುವ ಕಾರ್ಯಯೋಜನೆ ಸರಕಾರದ ಮುಂದಿದೆ.
ಇದರೊಂದಿಗೆ ಬೆಂವಿವಿ ಅಂಗಳದಲ್ಲಿ ನಡೆಯುತ್ತಿರುವ ಕೋಳಿ ಜಗಳಕ್ಕೆ ಮಂಗಳ ಹಾಡುವ ಲಕ್ಷಣಗಳಿವೆ. ಜತೆಗೆ ಮುಂದೆ ಇಂತಹ ಅಚಾತುರ್ಯ, ಅಪವ್ಯಸನಗಳು ಕಂಡುಬರದಂತೆಯೂ ಬಿಗಿಕ್ರಮ ಕೈಗೊಳ್ಳಲು ಸರಕಾರ ಚಿಂತಿಸುತ್ತಿದೆ.
ಇತ್ತೀಚೆಗೆ ವಿವಿಯ ಹಿರಿಯ ಅಧಿಕಾರಿಗಳಾದ ಸಯ್ಯದ್ ಜಮಾಲ್ ಮತ್ತು ಗುರುಮೂರ್ತಿ ಅವರನ್ನು ಸಸ್ಪೆಂಡ್ ಮಾಡಿದ ಕಹಿ ಘಟನೆಗಳು ನಡೆದ ಬಳಿಕ ಖುದ್ದು ಮುಖ್ಯಮಂತ್ರಿ ಸದಾನಂದ ಗೌಡರೇ ವಿವಿಯಲ್ಲಿನ ಕೋಳಿ ಜಗಳಕ್ಕೆ ಮಂಗಳ ಹಾಡಲು ಸೂಚಿಸಿ, ತಕ್ಷಣ ವರದಿ ಸಲ್ಲಿಸುವಂತೆ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಅವರಿಗೆ ಆದೇಶಿದ್ದರು. ಅದರಂತೆ ಸಿದ್ದಯ್ಯ ಇಂದು (ಮೇ 1) ವರದಿ ಸಲ್ಲಿಸಲಿದ್ದಾರೆ.