ಸ್ವಾಮೀಜಿಗೆ ಭಾರತ ರತ್ನ(?)- ಬರಗೆಟ್ಟ ದುರ್ಗಕ್ಕೇನು?

ಸೋನಿಯಾ ಮೇಡಂ, ನಾಡಿನ ಪ್ರಬಲ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ತುಮಕೂರು ಭೇಟಿ ಹಮ್ಮಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿ ನಡೆದಾಡುವ ದೇವರಿಗೆ ಬರ್ತ್ ಡೆ ಗಿಫ್ಟ್ ಆಗಿ ಭಾರತ ರತ್ನ ಘೋಷಿಸುವ ಸಾಧ್ಯತೆಯೂ ಇದೆ. ಆದರೆ ನಮ್ಮ ಬರಗೆಟ್ಟ ಒನಕೆ ಓಬವ್ವನ ಜಿಲ್ಲೆಗೆ ಸೋನಿಯಾ ಗಿಫ್ಟ್ ಏನು ಎಂದು ಸಹಜ ಕುತೂಹಲದಿಂದ ಕೇಳುತ್ತಿಲ್ಲ.
ಬದಲಿಗೆ ಬರಡು ನೆಲದಲ್ಲಿ ಜನರ 'ಕೈ' ಹಿಡಿಯಲು ( ಆ ನಂತರ ಜನ 'ಕೈ' ಹಿಡಿಯುವಂತಾಗಲು) ಮೇಡಂ ಏನು ಗಿಫ್ಟ್ ನೀಡಲಿದ್ದಾರೆ ಎಂದು ಇಲ್ಲಿನ ಜನ ಕೇಳುವಂತಾಗಿದೆ.
ಅನಾದಿ ಕಾಲದಿಂದಲೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಮೇಡಂ ಹಸಿರು ನಿಶಾನೆ ತೋರಿದರೆ ನಮ್ಮಗಳ ಬದುಕು ಹಸಿರಾದೀತು. ಪಕ್ಷದ ನಿಧಿಯಿಂದಲೋ ಅಥವಾ ಪ್ರಧಾನ ಮಂತ್ರಿಗಳ ಬರ ಪರಿಹಾರ ನಿಧಿಯಿಂದಲೋ ಎಲ್ಲಿಂದಲೋ ಒಟ್ನಿನಲ್ಲಿ ಸೋನಿಯಾ ಮೇಡಂ ಈ ಯೋಜನೆಗಳಿಗಾಗಿ ( ಭದ್ರಾ ಮೇಲ್ದಂಡೆ ಯೋಜನೆ) ಒಂದಷ್ಟು ಇಡಿಗಂಟು ನೀಡಿದರೆ ನಿಜಕ್ಕೂ ಅದು ಸಂಭಾವ್ಯ ಭಾರತ ರತ್ನ ಪುರಸ್ಕಾರಕ್ಕಿಂತಲೂ ನೂರುಪಟ್ಟು ಪರಿಣಾಮಕಾರಿಯಾಗಲಿದೆ ಎಂದು ದುರ್ಗದ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ ಮೇಡಂ ಶನಿವಾರ ಬೆಳಗ್ಗೆ 8.30ಕ್ಕೆ ಇಲ್ಲಿನ ಗ್ರಾಮವೊಂದಕ್ಕೆ (ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ) ಸಾಂಕೇತಿಕವಾಗಿ ಕೇವಲ ಅರ್ಧ ಗಂಟೆ ಭೇಟಿ ನೀಡುತ್ತಿರುವುದನ್ನು ಗಮನಿಸಿದರೆ ಸೋನಿಯಾರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು ಎಂದು ಇದೇ ದುರ್ಗದ ಮಂದಿ ಅದಾಗಲೇ ತರ್ಕಿಸಿ, ತಾವಾಯಿತು ತಮ್ಮ ಪಾಡಾಯಿತು ಎಂದು ತಲೆ ಮೇಲೆ ತಣ್ಣನೆ ಬಟ್ಟೆ ಮಡಗಿಕೊಂಡು ತಣ್ಣಗೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications