ಮೊದ್ಲು ಟೆಸ್ಟ್ ಮಾಡಿಸಿಕೊಳ್ಳಿ- ತಿವಾರಿಗೆ ಕೋರ್ಟ್
ಡಿಎನ್ಎ ಪರೀಕ್ಷೆಗಾಗಿ ಮೊದಲು ರಕ್ತದ ಮಾದರಿ ನೀಡಿ ಎಂದು ಹೈಕೋರ್ಟ್ ತಾಕೀತು ಮಾಡಿದೆ. ಹಾಗಾಗಿ ಅನ್ಯ ಮಾರ್ಗವಿಲ್ಲದೆ, ಅನಿವಾರ್ಯವಾಗಿ ತಿವಾರಿ ಈ ಬಾರಿ ಡಿಎನ್ಎ ಪರೀಕ್ಷೆಗಾಗಿ ತಮ್ಮ ರಕ್ತದ ಮಾದರಿ ನೀಡಲೇಬೇಕಾಗಿದೆ.
ಒಂದು ವೇಳೆ ತಿವಾರಿ ವರಾತ ತೆಗೆದರೆ ಪೊಲೀಸರ ಬಲ ಪ್ರಯೋಗಿಸಿ ಅವರಿಂದ ರಕ್ತ ಮಾದರಿ ಪಡೆಯಲು ತನ್ನದೇನೂ ಆಭ್ಯಂತರವಿಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ. 32 ವರ್ಷದ ರೋಹಿತ್ ಶೇಖರ್ ಎಂಬುವವರು ತಾವು ತಿವಾರಿ ಅವರ ಮಗ (ತಾಯಿ ಉಜ್ವಲ ಶರ್ಮಾ) ಎಂದು ಹೇಳಿ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಹಳೆಯ ಪ್ರಕರಣ ಇದಾಗಿದೆ. ರೋಹಿತ್, 18 ವರ್ಷದವರಾಗಿದ್ದಾಗ ತಿವಾರಿ ತಮ್ಮ ಜನ್ಮದಾತ ಎಂದು ಕೋರ್ಟಿಗೆ ಅಲವತ್ತುಕೊಂಡಿದ್ದರು.
'ನನ್ನ ಆತ್ಮಗೌರವ ಉಳಿಸಿಕೊಳ್ಳುವ ಸಲುವಾಗಿ ಮತ್ತು ಒಬ್ಬ ಹಿರಿಯ ನಾಗರಿಕನಾಗಿ ಡಿಎನ್ಎ ಪರೀಕ್ಷೆಗೆ ರಕ್ತದ ಮಾದರಿ ಕೊಡಲು ತಯಾರಿಲ್ಲ. ನಾನು 70 ವರ್ಷಗಳಿಂದಲೂ ರಾಜಕೀಯದಲ್ಲಿದ್ದೇನೆ. ಎಂದೂ ನನ್ನ ಮೇಲೆ ಯಾವ ರೀತಿಯ ಆರೋಪಗಳೂ ಕೇಳಿಬಂದಿಲ್ಲ' ಎಂದೇ ತಿವಾರಿ ಡಿಎನ್ಎ ಪರೀಕ್ಷೆಗೆ ಕೊಂಕು ತೆಗೆಯುತ್ತಿದ್ದರು.