ಲಂಚ: ಬಿಜೆಪಿ ಮಾಜಿ ಅಧ್ಯಕ್ಷ ಬಂಗಾರುಗೆ ಜೈಲು
ಶಸ್ತ್ರಾಸ್ತ್ರಗಳನ್ನು ಖರೀದಿ ವ್ಯವಹಾರದಲ್ಲಿ ಶಸ್ತ್ರಾಸ್ತ್ರ ದಲ್ಲಾಳಿಗಳಿಂದ ಒಂದು ಲಕ್ಷ ರು. ಲಂಚ ಪಡೆದಿದ್ದ ಆರೋಪ ಲಕ್ಷ್ಮಣ್ ಅವರ ಮೇಲಿತ್ತು. ರಕ್ಷಣಾ ಇಲಾಖೆಗೆ ಲಂಚ ಪಡೆದ ಕಂಪನಿಯ ಬಗ್ಗೆ ಶಿಫಾರಸು ಮಾಡಲು ಬಂಗಾರು ಲಕ್ಷ್ಮಣ್ ಮುಂದಾಗಿದ್ದರು ಎಂಬ ಪ್ರಕರಣದ ತೀರ್ಪನ್ನು ಸಿಬಿಐ ವಿಶೇಷ ಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶ ಕನ್ವಲ್ ಜೀತ್ ಆರೋರ ಅವರು ಏ.27 ರಂದು ನೀಡಿದ್ದಾರೆ.
ಗಳಗಳನೆ ಅತ್ತ ಬಂಗಾರು: ತೀರ್ಪು ಹೊರ ಬೀಳುತ್ತಿದ್ದಂತೆ ಕೋರ್ಟಿನಲ್ಲಿ ಗಳಗಳನೆ ಅಳುವುದಕ್ಕೆ ಶುರು ಮಾಡಿದ ಬಂಗಾರು ಅವರನ್ನು ಸಮಾಧಾನ ಪಡಿಸಲು ಯಾರು ಮುಂದಾಗಲಿಲ್ಲ. ಬಂಗಾರು ಅವರಿಗೆ ಸಿಗುವ ಶಿಕ್ಷೆ ಪ್ರಮಾಣ ಏನು ಎಂಬುದು ಏ.28ರಂದು ಕೋರ್ಟ್ ಪ್ರಕಟಿಸಲಿದೆ.
ಪ್ರಕರಣ ಹಿನ್ನೆಲೆ: 2001ರಲ್ಲಿ ಬಂಗಾರು ಲಕ್ಷ್ಮಣ್ ಅವರು ಇಂಗ್ಲೆಂಡ್ ಮೂಲದ ಕಂಪನಿ ವೆಸ್ಟ್ ಎಂಡ್ ಇಂಟರ್ನ್ಯಾಷನಲ್ ಪ್ರತಿನಿಧಿಯಿಂದ ಲಂಚ ತೆಗೆದುಕೊಳ್ಳುತ್ತಿರುವುದು ಮತ್ತು ರಕ್ಷಣಾ ಸಚಿವಾಲಯಕ್ಕೆ ಆ ಕಂಪನಿಯಿಂದ ಶಸ್ತ್ರಾಸ್ತ್ರ ಖರೀದಿಸಲು ಶಿಫಾರಸು ಮಾಡಲು ಲಕ್ಷ್ಮಣ್ ಅವರಿಗೆ ಮನವಿ ಮಾಡುತ್ತಿರುವ ದೃಶ್ಯಗಳನ್ನು ಸೆರೆಹಿಡಿದಿದ್ದ ತೆಹಲ್ಕಾ ಡಾಟ್ ಕಾಮ್ ದೇಶದಲ್ಲಿ ಸಂಚಲನ ಉಂಟು ಮಾಡಿತ್ತು.
ತೆಹಲ್ಕಾ.ಕಾಂ ಮಾರ್ಚ್ 13, 2001ರಂದು ಈ ವಿಡಿಯೋ ಪ್ರಸಾರ ಮಾಡಿದ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಗಾದಿಯಿಂದ ಲಕ್ಷ್ಮಣ್ ಕೆಳಗಿಳಿದಿದ್ದರು.
ನಂತರ ಪ್ರಕರಣ ಸಿಬಿಐ ಕೈ ತಲುಪಿ, ಬಂಗಾರು ಲಕ್ಷ್ಮಣ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ತಮ್ಮ ಮೇಲಿನ ವಿಚಾರಣೆಯನ್ನು ಕೈಬಿಡುವಂತೆ ಕೋರಿ ಬಂಗಾರು ಲಕ್ಷ್ಮಣ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಆದರೆ, ಪ್ರಕರಣ ಕೈಬಿಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಸುಪ್ರೀಂಕೋರ್ಟ್ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯ ಏ.27ರಂದು ಮತ್ತೆ ವಿಚಾರಣೆ ನಡೆಸಿ ಬಂಗಾರು ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದೆ.