ರಾಷ್ಟ್ರಪತಿ ಚುನಾವಣೆ, ನೋ ಇಂಟರೆಸ್ಟ್ ಎಂದ ಗೌಡ್ರು
ದೇಶದ ಮುಂದಿನ ರಾಷ್ಟ್ರಪತಿ ಆಯ್ಕೆ ವಿಷಯದಲ್ಲಿ ತಾವು ಯಾರ ಹೆಸರನ್ನೂ ಹೇಳುವುದಿಲ್ಲ. ಚುನಾವಣೆ ಕಣಕ್ಕೂ ಇಳಿಯುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಹೇಳಿದ್ದಾರೆ. ಹಾಸನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಈ ಬಗ್ಗೆ ದೊಡ್ಡ ದೊಡ್ಡ ಪಕ್ಷಗಳವರು ಮಾತನಾಡುತ್ತಾರೆ ಏನಾಗುತ್ತದೆ ನೋಡೋಣ ಎಂದರು.
ಇಂಥ ವಿಷಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಸಣ್ಣ ಪಕ್ಷಗಳು ಲೆಕ್ಕಕ್ಕೆ ಬರುವುದು ಕೊನೆಯಲ್ಲಿ ಎಂದರು. ಯಾರನ್ನು ರಾಷ್ಟ್ರಪತಿಯಾಗಿ ನೇಮಕ ಮಾಡಬೇಕು ಎನ್ನುವುದರ ಬಗ್ಗೆ ನಾನು ಏನನ್ನೂ ಹೇಳ ಬಯಸುವುದಿಲ್ಲ. ನನಗೆ ರಾಷ್ಟ್ರಪತಿ ಸ್ಥಾನದ ಬಗ್ಗೆ ಗೌರವವಿದೆ. ಒಕ್ಕಲಿಗರ ಸಂಘದ ಒತ್ತಾಯದ ಬಗ್ಗೆ ಇತರೆ ಪಕ್ಷಗಳು ನಿರ್ಧಾರ ಕೈಗೊಳ್ಳಬೇಕು. ನಾನೆಂದು ಅಧಿಕಾರ ಬಯಸಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಕಣಲ್ಲಿರುವ ಅಭ್ಯರ್ಥಿಗಳಲ್ಲಿ ಯಾರಿಗೆ ತಮ್ಮ ಬೆಂಬಲ ನೀಡುತ್ತಾರೆ ಎಂಬ ಗುಟ್ಟನ್ನು ಜೆಡಿಎಸ್ ಸಂಸದ ದೇವೇಗೌಡರು ಬಿಟ್ಟು ಕೊಟ್ಟಿಲ್ಲ. ಇತರೆ ಪಕ್ಷಗಳು ಈಗಾಗಲೇ ತಮ್ಮ ಬೆಂಬಲದ ಅಭ್ಯರ್ಥಿಗಳನ್ನು ಹೆಸರಿಸಿದೆ. ಕಲಾಂ ಅವರ ಪರ ಎಸ್ ಪಿ, ಎಐಎಡಿಎಂಕೆ, ಟಿಎಂಸಿ ಮುಂತಾದ ಪಕ್ಷಗಳು ನಿಂತಿದೆ. ಜುಲೈ ತಿಂಗಳ ಅಂತ್ಯಕ್ಕೆ ಹಾಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಅಧಿಕಾರ ಅವಧಿ ಮುಕ್ತಾಯವಾಗಲಿದೆ.