ಶಂಕರ ಬಿದರಿಯೇ ಮತ್ತೆ DG-IGP?
ಆದರೆ ಹಾಗೆ ವಿಚಾರಣೆ ನಡೆಸುವ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗದ ವರದಿಯನ್ನು ಒಮ್ಮೆ ಪರಿಶೀಲಿಸುವಂತೆಯೂ ಸೂಚಿಸಿದೆ. ಯಾರನ್ನೇ ನೇಮಕ ಮಾಡಿ, ಮೇ. 30ರೊಳಗಾಗಿ ನೇಮಕಗೊಳಿಸಿ ಕೈತೊಳೆದುಕೊಳ್ಳಿ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಸುಪ್ರೀಂ ಕೋರ್ಟಿನ ಇಂದಿನ ತೀರ್ಪಿನಿಂದ ನನಗೆ ಅತೀವ ಸಂತೋಷವಾಗಿದೆ. ನ್ಯಾಯಕ್ಕೆ ಜಯ ಸಿಕ್ಕಿದೆ ಎಂದು ಶಂಕರ ಬಿದರಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ಮಾ. 30 ರಾಜ್ಯ DG-IGP ನೇಮಕ ವಿಚಾರದಲ್ಲಿ CAT ತೀರ್ಪನ್ನು ಎತ್ತಿಹಿಡಿದು ಹೈಕೋರ್ಟ್ ವಿಭಾಗೀಯ ಪೀಠ ಅಂದಿನ ಪೊಲೀಸ್ ಮಹಾನಿರ್ದೇಶಕ ಶಂಕರ ಮಹಾದೇವ ಬಿದರಿ ನೇಮಕವನ್ನು ಅನೂರ್ಜಿತಗೊಳಿಸಿತ್ತು. ಜತೆಗೆ ಡಿಜಿಪಿ ಅಬ್ದುಲ್ ರಹಮಾನ್ ಇನ್ಫ್ಯಾಂಟ್ ಅವರನ್ನು ನೇಮಿಸಬಹುದು ಎಂದೂ ಪರೋಕ್ಷವಾಗಿ ಹೇಳಿತ್ತು. ಇದನ್ನು ಪ್ರಶ್ನಿಸಿ ಬಿದರಿ ಮತ್ತು ರಾಜ್ಯ ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದರು.
ಇದೀಗ DG-IGP ನೇಮಕವನ್ನು ರಾಜ್ಯ ಸರಕಾರದ ಅಧಿಕಾರ ವ್ಯಾಪ್ತಿಗೆ ಬಿಟ್ಟಿದೆ. ರಾಜ್ಯ ಸರಕಾರವೂ ಅಂದಿನಿಂದ ಶಂಕರ ಬಿದರಿ ಅವರತ್ತ ಒಲವು ಬೀರಿರುವುದರಿಂದ ಬಿದರಿ ಅವರನ್ನು ಮತ್ತೆ ಆ ಹುದ್ದೆಯಲ್ಲಿ ಪ್ರತಿಷ್ಠಾಪಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಹಾಲಿ DG-IGP ಸ್ಥಾನದಿಂದ ಎಆರ್ ಇನ್ಫ್ಯಾಂಟ್ ಅವರನ್ನು ಕೆಳಗಿಳಿಸುವುದಕ್ಕೆ ಕ್ಷಣಗಣನೆ ಶುರುವಾಗಿದೆ ಅನ್ನಬಹುದು.