ಹಿಂದೆಸರಿದ ವಿಶ್ವನಾಥ್: ಯಡ್ಡಿಗೆ ಸುಪ್ರೀಂ ಸಂಕಟ
ಗಣಿ ಅಕ್ರಮ ಮತ್ತು ಅಕ್ರಮ ಭೂ ಡಿನೋಟಿಫಿಕೇಷನ್ ಪ್ರಕರಣಗಳನ್ನು ಸಿಬಿಐ ನಂತಹ ಸಂಸ್ಥೆಗೆ ತನಿಖೆ ಒಪ್ಪಿಸಬೇಕು ಎಂದು CEC ಶುಕ್ರವಾರ ಸುಪ್ರೀಂಕೋರ್ಟಿಗೆ ಶಿಫಾರಸ್ಸು ಮಾಡಿತ್ತು. ಇದರಿಂದ ಸಂತುಷ್ಟಗೊಂಡ ವಿಶ್ವನಾಥ್, ಸುಪ್ರೀಂಕೋರ್ಟೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದು ಆಶಿಸಿ, ಹೈಕೋರ್ಟ್ ತೀರ್ಪಿನ ವಿರುದ್ಧ ತಾವು ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ ಪಡೆದಿದ್ದಾರೆ.
ಈ ಮಧ್ಯೆ, ಒಂದೇ ಅಕ್ರಮ ಪ್ರಕರಣದ ಬಗ್ಗೆ ಎರಡೆರಡು ತನಿಖೆಗಳು ನಡೆಯುವುದು ಬೇಡವೆಂದೂ, ಸೋಮವಾರ ಸುಪ್ರೀಂಕೋರ್ಟಿನಲ್ಲಿ ವಿಶ್ವನಾಥ್ ವಿಶೇಷ ಮನವಿ ಅರ್ಜಿಯ ಬಗ್ಗೆ ಏನು ತೀರ್ಪು ಹೊರಬೀಳುತ್ತದೋ ಅದನ್ನು ಅನುಸರಿಸಿ, ತಾನು ಆದೇಶ ಹೊರಡಿಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳಿತ್ತು.
ಇದೀಗ ವಿಶ್ವನಾಥ್, ಯಡಿಯೂರಪ್ಪ ವಿರುದ್ಧ ವಿಶೇಷ ಮನವಿ ಅರ್ಜಿಯನ್ನು ವಾಪಸ್ ಪಡೆದಿರುವುದರಿಂದ ಸುಪ್ರೀಂಕೋರ್ಟ್ ಸಂದಿಗ್ಧತೆಯಿಂದ ಪಾರಾಗಿದ್ದು, CEC ಶಿಫಾರಸ್ಸಿನ ಅನ್ವಯ ತನ್ನ ಆದೇಶ ಹೊರಡಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. CEC ಶಿಫಾರಸ್ಸಿನಂತೆ ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆಯಾಗಲಿ ಎಂದು ಸುಪ್ರೀಂಕೋರ್ಟ್ ಮುಂದಿನ ಸೋಮವಾರ ನಿರ್ದೇಶನ ನಿಡುವ ಸಾಧ್ಯತೆಯಿದೆ. ಹಾಗಾದಲ್ಲಿ ಪ್ರಸಕ್ತ ಉಳಿದಿರುವ 12 ತಿಂಗಳ ವಿಧಾನಸಭೆ ಅವಧಿಗೆ ಯಡಿಯೂರಪ್ಪ ಮತ್ತೆ ಸಿಎಂ ಆಗುವುದು ಅಷ್ಟಕಷ್ಟವಾಗಲಿದೆ.
ಖಾಸಗಿ ಗಣಿ ಕಂಪನಿಯೊಂದು ಯಡಿಯೂರಪ್ಪ ಕುಟುಂಬದವರಿಗೆ ಸೇರಿದ ಟ್ರಸ್ಟ್ಗೆ ಹಣ ಸಂದಾಯ ಮಾಡಿದ ಸಂದರ್ಭಗಳನ್ನು ಪರಿಗಣಿಸಲು ಅವಕಾಶ ಕಲ್ಪಿಸುವ ಲೋಕಾಯುಕ್ತ ಕಾಯಿದೆಯ 22ನೇ ಅಧ್ಯಾಯವನ್ನು ಕಡೆಗಣಿಸಿರುವ ಹೈಕೋರ್ಟ್ ತೀರ್ಪಿನ ಬಗ್ಗೆ (ಮಾರ್ಚ್ 7) ವಿಶ್ವನಾಥ್ ಅರ್ಜಿಯಲ್ಲಿ ಆಕ್ಷೇಪ ಎತ್ತಿದ್ದರು.