ಪರಿಸ್ಥಿತಿಯ ಕುಚೋದ್ಯ : ರಸ್ತೆಯಲ್ಲಿ ಹೆರಿಗೆ, ತಾಯಿ ಸಾವು
20ರ ಆಸುಪಾಸಿನಲ್ಲಿದ್ದ ತುಂಬು ಗರ್ಭಿಣಿಯೊಬ್ಬರು ಕಮಲಾನಗರದ ಶಕ್ತಿ ಗಣಪತಿ ನಗರದ ರಸ್ತೆಯಲ್ಲಿರುವ ಕಿರಾಣಿ ಅಂಗಡಿಗೆ ತನ್ನಿಬ್ಬರು ಚಿಕ್ಕ ಮಕ್ಕಳೊಂದಿಗೆ ಬೆಳಿಗ್ಗೆ ಬಂದಿದ್ದರು. ಇದ್ದಕ್ಕಿದ್ದಂತೆ ಅವರಿಗೆ ಹೆರಿಗೆ ನೋವು ಶುರುವಾಗಿದೆ. ಅಂಗಡಿಯವರ ನೆರವಿಗೆ ಬಂದರೂ ಅಂಗಡಿ ಮುಂದಿನ ಕಾಲುದಾರಿಯಲ್ಲಿಯೇ ಹೆರಿಗೆಯಾಗಿಬಿಟ್ಟಿದೆ.
ಮಗುವನ್ನು ಎತ್ತಿಕೊಂಡು ಆಕೆ ನಡೆಯಲು ಪ್ರಾರಂಭಿಸುತ್ತಿದ್ದಂತೆ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾಳೆ. ಹಾರಿಹೋಕರು ಆಕೆಯನ್ನು ಅಶೋಕ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಕರಳುಬಳ್ಳಿಯನ್ನು ವೈದ್ಯರು ಕತ್ತರಿಸಿ, ಆಕೆಗೆ ತೀವ್ರ ರಕ್ತಸ್ರಾವವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವಾಣಿ ವಿಲಾಸ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಮಹಿಳೆ ಕಣ್ಣುಮುಚ್ಚಿದ್ದಾಳೆ.
ಅಮ್ಮನಿಂದ ಬೇರ್ಪಟ್ಟ ಗಂಡು ಮಗುವನ್ನು ಇನ್ಕ್ಯುಬೇಟರ್ನಲ್ಲಿ ಇರಿಸಲಾಗಿದ್ದು, ಮಗುವಿನ ಆರೋಗ್ಯದ ಬಗ್ಗೆ ನಿಖರವಾಗಿ ಈಗಲೇ ಏನೂ ಹೇಳಲಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಒಂದು ಬಾರಿ ಫಿಟ್ಸ್ ಕೂಡ ಬಂದಿದ್ದು, ಮಗುವನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.
ಆಶ್ಚರ್ಯದ ಸಂಗತಿಯೆಂದರೆ, ಆ ತಾಯಿಗೆ ರಸ್ತೆಯಲ್ಲಿ ಹೆರಿಗೆಯಾಗುತ್ತಿದ್ದರೆ ಯಾರೂ 108 ನಂಬರ್ ಕರೆ ಮಾಡಿ ಆಂಬುಲನ್ಸ್ ತರಲು ಪ್ರಯತ್ನಿಸಿಲ್ಲ. ಸೂಕ್ತವಾದ ಸಮಯದಲ್ಲಿ ಆಂಬುಲನ್ಸ್ ತರಿಸಿ ಚಿಕಿತ್ಸೆ ದೊರೆತಿದ್ದರೆ ತಾಯಿಯೂ ಉಳಿಯುತ್ತಿದ್ದಳು ಮತ್ತು ಮಗುವೂ ಅನಾಥವಾಗುತ್ತಿರಲಿಲ್ಲ. ಪರಿಸ್ಥಿತಿಯ ಕುಚೋದ್ಯವೆಂದರೆ, ತಾಯಿಯೊಂದಿಗಿದ್ದ ಆ ಇಬ್ಬರು ಮಕ್ಕಳೂ ಕಾಣೆಯಾಗಿದ್ದಾರೆ. ಅಸುನೀಗಿರುವ ಹೆಂಗಸನ್ನು ಆಕೆಯ ಗಂಡ ತೊರೆದಿದ್ದು ತನ್ನ ಸಹೋದರಿಯ ಜೊತೆಗಿದ್ದಳೆಂದು ಕೆಲವರು ಹೇಳಿದ್ದಾರೆ.