ಕುಕ್ಕೆ ಸುಬ್ರಹ್ಮಣ್ಯಗೆ ಮೊರೆಹೋದ ವಿಜಯ್ ಮಲ್ಯ
ಧರೆಗಿಳಿದಿರುವ ಕಿಂಗ್ಫಿಶರ್ ಏರ್ಲೈನ್ಸ್ ನಿಂದಾಗಿ ಕಂಗೆಟ್ಟಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಐಪಿಎಲ್ ಟೂರ್ನಮೆಂಟಿನಲ್ಲಿ ತಮ್ಮ ಮಾಲೀಕತ್ವದ ಕಿಂಗ್ಫಿಶರ್ ತಂಡವು ವಿಜಯೀಭವವಾಗುವಂತೆ ಹರಸೋ ತಂದೆ ಎಂದು ಸುಬ್ರಮಣ್ಯನಲ್ಲಿ ಬೇಡಿಕೊಂಡರು. ಮಂಗಳೂರು ಮೂಲದ ಮಲ್ಯ ಅವರು ಆಗಾಗ ಕುಕ್ಕೆ ಸುಬ್ರಮಣ್ಯ ದೇವಳಕ್ಕೆ ಭೇಟಿ ನೀಡುತ್ತಿರುತ್ತಾರೆ.
ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಹಾಗೂ ಆಶ್ಲೇಷ ಬಲಿಗೆ ಸಂಕಲ್ಪ ಮಾಡಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ದೇವಳದ ಗರ್ಭಗುಡಿಯ ಹೊರಗಿನ ಮಂಟಪದ ಬಾಗಿಲಿಗೆ ಚಿನ್ನದ ಕವಚ ಹೊದಿಸುವುದಾಗಿ ಹರಕೆ ಹೊತ್ತರು. ದೇವಳದ ಪರವಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಮಡ್ತಿಲ, ಕಾರ್ಯ ನಿರ್ವಹಣಾಧಿಕಾರಿ ಎಚ್.ಎಂ. ಕಾಳಿ ಹಾಗೂ ಶಿಷ್ಟಾಚಾರಾಧಿಕಾರಿ ವೆಂಕಟರಾಜು ಅವರು ಮಲ್ಯರನ್ನು ಸ್ವಾಗತಿಸಿದರು.
ದೇಗುಲ ದರ್ಶನದ ಭಾಗವಾಗಿ ನಂತರ ಬಂಟ್ವಾಳಕ್ಕೆ ತೆರಳಿದ ಮಲ್ಯ, ತಮ್ಮ ಮನೆ ದೇವರು ಶ್ರೀವೆಂಕರಮಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ದೇಗುಲದಲ್ಲಿ ಅವರು ಭಕ್ತಿ ಪರವಶರಾಗಿ ಕಾಲಕಳೆದರು. [Video : ಕುಕ್ಕೆ, ಕೊಲ್ಲೂರು, ಬಂಟ್ವಾಳದ ಮನೆದೇವರ ದರ್ಶನ ಪಡೆದ ಮಲ್ಯ]
ತಮಗೆ, ಅಂದರೆ, ಮುಖ್ಯವಾಗಿ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ತಟ್ಟಿರುವ ಶಾಪವನ್ನು ಪರಿಹರಿಸೋ ತಂದೆ ಎಂದು ಶ್ರೀಮನ್ನಾರಾಯಣನಲ್ಲಿ ಅರಿಕೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಮಲ್ಯ ಜೊತೆ ಅವರ ಆಪ್ತ ಕಾರ್ಯದರ್ಶಿ ಮತ್ತು ಭದ್ರತಾ ಸಿಬ್ಬಂದಿ ಬಿಟ್ಟರೆ ಕುಟುಂಬದ ಇತರ ಸದಸ್ಯರು ಭಾಗವಹಿಸಿರಲಿಲ್ಲ.
ತಮ್ಮ ಈ ದೇವಸ್ಥಾನದ ಭೇಟಿಯನ್ನು ಮಲ್ಯ ಅವರು ಗುಟ್ಟಾಗಿ ಇಟ್ಟಿದ್ದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ನಿರಾಕರಿಸಿದರು. ಆದರೆ, ಅದು ಹೇಗೋ, ಸುವರ್ಣ ಮತ್ತು ಪಬ್ಲಿಕ್ ಟಿವಿಯ ಕ್ಯಾಮೆರಾಮನ್ ಗಳ ಕಣ್ಣಿಗೆ ಬಿದ್ದು ಬಿಟ್ಟರು.