ಬರದ ತೀವ್ರತೆ : ಶಾಸಕರ ವಿದೇಶ ಯಾತ್ರೆಗೆ ತಣ್ಣೀರು
ದೆಹಲಿಗೆ ಸರ್ವಪಕ್ಷಗಳ ನಿಯೋಗ : ವಿಧಾನಸೌಧದಲ್ಲಿ ಗುರುವಾರ ನಡೆಸಿದ ಸರ್ವಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೋಟಮ್ಮ, ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ, ಪ್ರಧಾನ ಕಾರ್ಯದರ್ಶಿ ರಂಗನಾಥ್ ಮುಂತಾದವರು ಭಾಗವಹಿಸಿದ್ದರು. ಈ ಸಭೆಯಲ್ಲಿ, ಈ ತಿಂಗಳ ಕೊನೆಯ ವಾರದಲ್ಲಿ ಸರ್ವಪಕ್ಷಗಳ ನಿಯೋಗವನ್ನು ಕೇಂದ್ರಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಶೇ. 50ರಷ್ಟು ಹಣ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಾಯ ಹೇರಲು ಸರ್ವಪಕ್ಷಗಳ ಸಭೆಯಲ್ಲಿ ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ 2,605 ಕೋಟಿ ರು.ಗಳ ನೆರವು ಕೋರಿ ಮನವಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಪ್ರಸ್ತುತ ಪರಿಸ್ಥಿತಿಯ ತೀವ್ರತೆಯ ಹಿನ್ನೆಲೆಯಲ್ಲಿ 4,500 ಕೋಟಿ ರು.ಗಳ ನೆರವು ಕೋರಿ ಪರಿಷ್ಕೃತ ಮನವಿ ಸಲ್ಲಿಸಲು ಸಭೆ ನಿರ್ಧರಿಸಿದೆ.
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಸಂಬಂಧಿಸಿದ ಯೋಜನೆಗಳನ್ನು ರೂಪಿಸಲಾಗುತ್ತಿದೆ. 1972-73, 1983-84ರಲ್ಲಿ ಸಂಭವಿಸಿದ ಬರ ಪರಿಸ್ಥಿತಿಯ ತೀವ್ರತೆ ಈಗ ಕೂಡ ಇದ್ದು, ರಾಜ್ಯ ಸರಕಾರ ಬರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿದೆ ಎಂದು ಸದಾನಂದ ಗೌಡ ವಿವರಿಸಿದರು.
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ : ಈಗ ಉತ್ತಮ ಮಳೆ ನಿರೀಕ್ಷೆ ಇದ್ದು ರೈತರಿಗೆ ಅಗತ್ಯವಾದಷ್ಟು ರಸಗೊಬ್ಬರ, ಬಿತ್ತನೆ ಬೀಜ, ದಾಸ್ತಾನು ಮಾಡಲಾಗಿದೆ. ಸರಕಾರದಿಂದ ತೊಗರಿ ಬೆಂಬಲ ಬೆಲೆ ಖರೀದಿ ಚಾಲ್ತಿಯಲ್ಲಿದೆ. ದ್ರಾಕ್ಷಿ, ದಾಳಿಂಬೆ, ಆಲೂಗಡ್ಡೆ ಉತ್ಪನ್ನಕ್ಕೆ ಬೆಂಬಲ ಬೆಲೆ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ರೇಷ್ಮೆ ಬೆಳೆಯ ಬೆಲೆಯಲ್ಲಿಯೂ ಕುಸಿತ ಉಂಟಾಗಿದ್ದು ಆ ಸಂಬಂಧ ಬೆಂಬಲ ಬೆಲೆ, ಅನುದಾನ ನೀಡಿಕೆಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದೆಂದು ಮುಖ್ಯಮಂತ್ರಿ ನುಡಿದರು.
ಚಾಮರಾಜನಗರ, ಮೈಸೂರು ಜಿಲ್ಲೆಯಲ್ಲಿ ಅರಿಶಿಣದ ಬೆಲೆ ಕುಸಿತವಾಗಿದೆ. ಅದನ್ನು ಪರಿಗಣಿಸಿ 5,000 ರು.ಗಳ ಬೆಂಬಲ ಬೆಲೆ ನೀಡಲು ಸರಕಾರ ಮುಂದಾಗಿದೆ. ಈ ಸಂಬಂಧ ಈಗಾಗಲೇ 3 ಕೋಟಿ ರು.ಗಳನ್ನು ಚಾಮರಾಜನಗರಕ್ಕೆ ಮತ್ತು 1 ಕೋಟಿ ರು.ಗಳನ್ನು ಮೈಸೂರಿಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.