ಅಕ್ರಮ ಗಣಿಗಾರಿಕೆ : ಸಿಇಸಿ ಶಿಫಾರಸು ಒಪ್ಪಿದ ಕೋರ್ಟ್

ನ್ಯಾಯಾಲಯದ ಆದೇಶದಂತೆ, ಅಕ್ರಮ ಗಣಿಗಾರಿಕೆಯ ಆರೋಪ ಎದುರಿಸದಿರುವ ಅಥವಾ ಸಣ್ಣಪುಟ್ಟ ಆರೋಪ ಎದುರಿಸುತ್ತಿರುವ ಕಂಪನಿಗಳು ಗಣಿಗಾರಿಕೆ ಆರಂಭಿಸುವ ದಿನಗಳು ದೂರವಿಲ್ಲ ಎಂದು ಕರ್ನಾಟಕ ಸರಕಾರದ ಮೈನ್ಸ್ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಎಚ್.ಆರ್. ಶ್ರೀನಿವಾಸ ಅವರು ತಿಳಿಸಿದ್ದಾರೆ. ಆದರೆ ಪರಿಹಾರ ಮತ್ತು ಪುನರುಜ್ಜೀವನ ಯೋಜನೆಯನ್ನು ಸಿಇಸಿ ಒಪ್ಪಿದ ನಂತರ ಗಣಿಗಾರಿಕೆ ಆರಂಭವಾಗಲಿದೆ.
ಸರ್ವೋಚ್ಚ ನ್ಯಾಯಾಲಯವೇ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಗಣಿಗಾರಿಕೆ ಕಂಪನಿಗಳನ್ನು ಆರೋಪಗಳಿಗೆ ಅನುಗಣವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ನಡೆಸಿ ಫೆಬ್ರವರಿ 26 ಮತ್ತು ಮಾರ್ಚ್ 2ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದವು. ಈಗ ಸರ್ವೋಚ್ಚ ನ್ಯಾಯಾಲಯ ಸಿಇಸಿಯ ಎಲ್ಲ ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಈ ಆದೇಶ ಕಾನೂನುಬದ್ಧವಾಗಿ ಗಣಿಗಾರಿಕೆ ಮಾಡುತ್ತಿದ್ದ ಗಣಿ ಮಾಲಿಕರಲ್ಲಿ ಸಂತಸ ಅರಳಿಸಲಿದೆ.
ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ದೂರು ನೀಡಿದ್ದರ ಹಿನ್ನೆಲೆಯಲ್ಲಿ, ವಿಚಾರಣೆ ನಡೆಸಿದ ನಂತರ 2011ರ ಜುಲೈನಲ್ಲಿ ಕಬ್ಬಿಣ ಅದಿರು ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಕ್ರಮವಾಗಿ 25 ಮಿಲಿಯನ್ ಮತ್ತು 5 ಮಿಲಿಯನ್ ಟನ್ ಕಬ್ಬಿಣದ ಅದಿರು ಮಾತ್ರ ಉತ್ಪಾದಿಸಬೇಕೆಂಬ ಶಿಫಾರಸನ್ನೂ ನ್ಯಾಯಾಲಯ ಒಪ್ಪಿಕೊಂಡಿದೆ.
ಈಗಾಗಲೆ ಶೇಖರಿಸಿಟ್ಟಿರುವ ಕಬ್ಬಿಣದ ಅದಿರಿನ ವಿಲೇವಾರಿ ಮತ್ತು ಸ್ಟೀಲ್ ಪ್ಲಾಂಟ್ನಲ್ಲಿರುವ ಬ್ಲಾಸ್ಟ್ ಫರ್ನೇಸ್ಗಳ ಕಾಮಗಾರಿಯ ಕುರಿತಂತೆ ವಿಚಾರಣೆಯನ್ನು ಮುಂದಿನ ಶುಕ್ರವಾರ ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಹೇಳಿದೆ. ಗಣಿಗಾರಿಕೆಯನ್ನು ಆರಂಭಿಸಲು ಅನುಮತಿ ನೀಡಬೇಕು ಮತ್ತು ಕಬ್ಬಿಣ ಅದಿರು ರಫ್ತು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಗಣಿ ಮಾಲಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನೂ ಸುಪ್ರೀಂ ಕೋರ್ಟ್ನ ಗ್ರೀನ್ ಬೆಂಚ್ ಮುಂದೂಡಿದೆ.












Click it and Unblock the Notifications