ಲೋಕಾಯುಕ್ತ ದಾಳಿ: ಅಪರೂಪಕ್ಕೆ ಶಿಕ್ಷೆಗೂ ಗುರಿ
ಏನಪಾ ಅಂದರೆ, ಮೈಸೂರು ದಕ್ಷಿಣ ಉಪ ನೋಂದಣಾಧಿಕಾರಿ ಕೆ.ಎಸ್. ಮಹದೇವಯ್ಯ ಅಕ್ರಮ ಆಸ್ತಿ ಗಳಿಸಿರುವುದು ನಿಜ ಎಂದು ಲೋಕಾಯುಕ್ತ ಪೊಲೀಸರು ಕೋರ್ಟಿನಲ್ಲಿ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ, ಭ್ರಷ್ಟ ಮಹದೇವಯ್ಯಗೆ ಇಲ್ಲಿನ ಮೂರನೇ ಹೆಚ್ಚುವರಿ ನ್ಯಾಯಾಲಯ ಮೂರೂವರೆ ವರ್ಷ ಕಠಿಣ ಶಿಕ್ಷೆ ಮತ್ತು 60 ಲಕ್ಷ ರೂ. ದಂಡ ವಿಧಿಸಿ, ನ್ಯಾ. ಚಂದ್ರಮಲ್ಲೇಗೌಡ ಅವರು ಗುರುವಾರ ಶಿಕ್ಷೆಯ ತೀರ್ಪು ಪ್ರಕಟಿಸಿದರು.
ಪ್ರಕರಣ ಏನು: 1999ರಲ್ಲಿ ರಾಮನಗರದಲ್ಲಿ ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹದೇವಯ್ಯ ನಿವಾಸ, ಕಚೇರಿಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಮೈಸೂರಿನ ಸಿದ್ದಾರ್ಥ ಲೇಔಟ್ನಲ್ಲಿರುವ ಅವರ ಮನೆಯಲ್ಲಿ 1.3 ಕೆಜಿ ಚಿನ್ನಾಭರಣ, 25 ಕೆ.ಜಿ. ಬೆಳ್ಳಿ, ಮಳ್ಳವಳ್ಳಿಯಲ್ಲಿ 12 ಎಕರೆ ಜಮೀನು ಮತ್ತು ನಾಚನಹಳ್ಳಿ ಪಾಳ್ಯದ ನಿವೇಶನದ ದಾಖಲೆ ಹಾಗೂ 5.20 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದರು.
ವಿಚಾರಣೆಯಲ್ಲಿ ಮಹದೇವಯ್ಯ 67 ಲಕ್ಷ ರೂ. ಗಳಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ನ್ಯಾಯಾಲಯಕ್ಕೆ ಮನವರಿಕೆಯಾದ ಹಿನ್ನೆಲೆಯಲ್ಲಿ ಇಂದು ಅಂತಿಮ ವಿಚಾರಣೆ ನಡೆಸಿ ಮಹದೇವಯ್ಯಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಮಹದೇವಯ್ಯ ಹೆಚ್ಚು ದಂಡ ತೆರುವ ಶಿಕ್ಷೆ ಪಡೆದ ಎರಡನೆ ಅಧಿಕಾರಿ. ಈ ಹಿಂದೆ ಪ್ರಾಚ್ಯ ವಸ್ತು ಇಲಾಖೆಯ ಸಿದ್ದಪ್ಪಪೂಜಾರ ಎಂಬವರಿಗೆ 65 ಲಕ್ಷ ರೂ. ದಂಡ ವಿಧಿಸಲಾಗಿತ್ತು.