ಏ.15ರವರೆಗೆ ಕಾಯಲು ಯಡಿಯೂರಪ್ಪಗೆ ಪ್ರಧಾನ್ ಸೂಚನೆ

ಒಂದೆಡೆ ಮುಖ್ಯಮಂತ್ರಿಯಾಗಿರುವ ಡಿವಿ ಸದಾನಂದ ಗೌಡರು ಅತ್ಯುತ್ತಮವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ, ಬರ ಪರಿಹಾರ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂದು ಶಭಾಶ್ಗಿರಿ ನೀಡುವುದು, ಮತ್ತೊಂದೆಡೆ ನಾಯಕತ್ವದ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯದ ನಾಯಕರ ಜೊತೆ ಹಿರಿಯ ನಾಯಕರು ಬಂದು ಮಾತನಾಡಿಕೊಂಡು ಹೋಗುವುದು ನಡೆದೇ ಇದೆ.
ಚುನಾವಣೆಗೆ ಕಾಂಗ್ರೆಸ್ ತಣ್ಣಗೆ ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಮತ್ತೆ 'ಖಾಸಗಿ' ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಬಂದಿರುವ, ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರು ಭಾನುವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತಿತರ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಚರ್ಚೆ ಇಂದು ಕೂಡ ಮುಂದುವರಿಯಲಿದ್ದು, ನಂತರ ಹೈಕಮಾಂಡಿಗೆ ವರದಿ ಸಲ್ಲಿಸಲಿದ್ದಾರೆ.
ದಿಟ್ಟ ನಿರ್ಧಾರ ತಳೆಯಲು ಹೈಕಮಾಂಡ್ ಹಿಂದೆಮುಂದೆ ನೋಡುತ್ತಿರುವುದರ ಲಾಭ ಪಡೆಯಲು ಹವಣಿಸುತ್ತಲೇ ಇರುವ ಯಡಿಯೂರಪ್ಪ, ಮುಖ್ಯಮಂತ್ರಿ ಬದಲಾವಣೆಯ ಸಂಗತಿಯನ್ನು ಪ್ರಧಾನ್ ಅವರಿಗೆ ಮತ್ತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯ ಬಜೆಟ್ ನಂತರ ನೋಡುವುದಾಗಿ ಹೇಳಿದ್ದಿರಿ ಎಂದಿರುವ ಯಡಿಯೂರಪ್ಪ, ಇದೇ ಸಂಗತಿಯನ್ನು ಹೈಕಮಾಂಡಿಗೂ ಮನವರಿಕೆ ಮಾಡಿಕೊಂಡಿ ಎಂದು ಪ್ರಧಾನ್ ಅವರಿಗೆ ಅಂಗಲಾಚಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಇಸಿ ವರದಿಯ ಆಧಾರದ ಮೇಲೆ ಹೆಚ್ಚಿನ ತನಿಖೆ ನಡೆಸುವ ಕುರಿತು ಸುಪ್ರೀಂ ಕೋರ್ಟ್ ಏ.15ರಂದು ತೀರ್ಪು ನೀಡುವ ಸಂಭವನೀಯತೆ ಇರುವುದರಿಂದ, ಕನಿಷ್ಠ ಅಲ್ಲಿಯತನಕ ಸಂಯಮದಿಂದ ಕಾಯಿರಿ, ನಂತರ ನೋಡೋಣ ಎಂಬ ಮಾತನ್ನು ಯಡಿಯೂರಪ್ಪನವರಿಗೆ ಪ್ರಧಾನ್ ಹೇಳಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಪ್ರಧಾನ್ ಅವರನ್ನು ಭೇಟಿ ಮಾಡುವ ಉದ್ದೇಶದಿಂದಲೇ, 'ಸಮಯಾಭಾವ'ದಿಂದ ಉತ್ತರ ಕರ್ನಾಟಕ ಬರ ಪ್ರದೇಶಗಳ ಭೇಟಿಯನ್ನು ಯಡಿಯೂರಪ್ಪ ಮೊಟಕುಗೊಳಿಸಿದ್ದರು.
ಪ್ರಧಾನ್ ಅವರನ್ನು ಭೇಟಿ ಮಾಡಿರುವ ಆರ್ ಅಶೋಕ್, ಎಸ್ ಸುರೇಶ್ ಕುಮಾರ್ ಮುಂತಾದ ನಾಯಕರು, ವಿಧಾನಸಭೆ ಇನ್ನು ಒಂದು ವರ್ಷ ಮಾತ್ರ ಬಾಕಿಯಿದ್ದು, ಆದಷ್ಟು ಬೇಗನೆ ಬಿಕ್ಕಟ್ಟು ಶಮನ ಮಾಡಬೇಕೆಂದು ಆಗ್ರಹಿಸಿದ್ದಾರೆ. ಅಶೋಕ್ ಶೆಟ್ಟರ್ ಅವರು ಕೂಡ ಪ್ರಧಾನ್ ಅವರನ್ನು ಭೇಟಿ ಮಾಡಿ, ತಮ್ಮ ಬಣದ ಶಾಸಕರ ಅನಿಸಿಕೆಗಳನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ. ಶಿವಮೊಗ್ಗದಲ್ಲಿರುವ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ದೂರವಾಣಿ ಮುಖಾಂತರ ಮಾತನಾಡಿದ್ದಾರೆ.












Click it and Unblock the Notifications