ಈನಾಡು ರಾಮೋಜಿ ರಾವ್ ಮೇಲೆ ಬಿತ್ತು ಕೇಸು
ವಿಶಾಖಪಟ್ಟಣ ನಗರದ ಹೊರವಲಯದಲ್ಲಿ ಈನಾಡು ಕಚೇರಿಗೆ ಸಂಬಂಧಪಟ್ಟ ಸರಕಾರಿ ಒಡೆತನದ ಜಾಗವೇ ಈ ವಿವಾದದ ಕೇಂದ್ರಬಿಂದು. ಸರಕಾರವು ಈ ನಿವೇಶನವನ್ನು ರಾಮೋಜಿರಾವ್ ಗೆ ಹಂಚಿಕೆ ಮಾಡಿತ್ತು. ಅದರಲ್ಲಿ ಸ್ವಲ್ಪ ಭಾಗವನ್ನು ರಸ್ತೆ ಅಗಲೀಕರಣಕ್ಕಾಗಿ ಸರಕಾರಕ್ಕೆ ವಾಪಸ್ ಮಾಡಿದರು.
ಆದರೆ ಹಾಗೆ ವಾಪಸ್ ಮಾಡಿದ ಜಾಗ ವರ್ಮಾ ಎಂಬ ಬೇರೊಬ್ಬ ವ್ಯಜ್ತಿಗೆ ಸೇರಿದ್ದಾಗಿತ್ತು. ರಸ್ತೆಗೆ ಬಿಟ್ಟ ಜಾಗ ತನ್ನದೆಂದು ಹೇಳಿಕೊಂಡು ವಾಪಸ್ ಮಾಡಿದ ರಾಮೋಜಿರಾವ್ ಅದರ ಬದಲಿಗೆ ಮತ್ತಷ್ಟು ಜಾಗವನ್ನು ಸರಕಾರದಿಂದ ಪಡೆದುಕೊಂಡಿದ್ದರು.
ಪ್ರಕರಣದ ಮೊದಲ ಆರೋಪಿ ನಂಬರ್ 1 ರಾಮೋಜಿರಾವ್ ಹಾಗೂ ಆರೋಪಿ ನಂಬರ್ 2 ಕಿರಣ್ ನಡೆಸಿದ ಈ ಅಕ್ರಮಕ್ಕೆ 1975ರಲ್ಲಿ ವಿಶಾಖಪಟ್ಟದ ಅಂದಿನ ಜಿಲ್ಲಾಧಿಕಾರಿಗಳಾದ ಕೆವಿ ರಾವ್ ಮತ್ತು ಆನಂತರ 1985ರಲ್ಲಿ ಎಸ್ ವಿ ಪ್ರಸಾದ್ ಕುಮ್ಮಕ್ಕು ನೀಡಿದ್ದರು.
ವರ್ಮಾ 1974ರಲ್ಲಿ 2.78 ಎಕರೆ ಜಾಗವನ್ನು ರಾಮೋಜಿಗೆ 33 ವರ್ಷಗಳ ಭೋಗ್ಯಕ್ಕೆ ನೀಡಿದರು. ಆ ಅವಧಿ 2007ರಲ್ಲಿ ಮುಕ್ತಾಯಗೊಂಡಿತು. ಈ ಮಧ್ಯೆ, 2007ರಲ್ಲಿ ಸ್ಥಳೀಯ ಪೌರಾಡಳಿತವು ಮೂಲಸೌಕರ್ಯ ಅಭಿವೃದ್ಧಿಗಾಗಿ ಒಂದಷ್ಟು ಜಾಗವನ್ನು (7 ಸೆಂಟ್) ಸ್ವಾಧೀನಪಡಿಸಿಕೊಂಡಿತು.
ಆದರೆ ಭೋಗ್ಯವಾಗಿ ಪಡೆದಿದ್ದ ಜಾಗದಲ್ಲಿ (ವಿವಾದಿತ 7 ಸೆಂಟ್ ಜಾಗ) ತನ್ನದೇ ಎಂದು ಹೇಳಿಕೊಂಡು ರಾಮೋಜಿ, ಅದರ ಬದಲಾಗಿ ಬೆಲೆಬಾಳುವ ಕಡೆ ಬೇರೆ ಜಾಗ ಪಡೆದು ರಾಜದ್ರೋಹವನ್ನೂ ಮಾಡಿದರು ಎಂಬುದು ಪ್ರಕರಣದ ತಿರುಳು.