ತಾರಾ ವೇಶ್ಯಾವಾಟಿಕೆ: ರಾಜಕೀಯದಲ್ಲಿ ಬಿರುಗಾಳಿ
ತಾರಾ ಚೌಧರಿ ಎಂಬ ಈ ನಟಿಮಣಿ ಪೊಲೀಸರ ಮುಂದೆ ಬಾಯ್ಬಿಟ್ಟರೆ ದೊಡ್ಡ ದೊಡ್ಡ ತಲೆಗಳೇ ಉರುಳಲಿವೆ. ಇಷ್ಟಕ್ಕೂ ಈ ತಾರಾ ಚೌಧರಿ ಹೇಗೆ ಕಾರ್ಯವೆಸಗುತ್ತಿದ್ದಳು ಅಂದರೆ ದೊಡ್ಡ ದೊಡ್ಡ ನಾಯಕರು, ಅಧಿಕಾರಿಗಳಿಗೆ ಪಸಂದಾದ ಬೆಲೆವೆಣ್ಣುಗಳ ರುಚಿ ತೋರಿಸಿ, ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು. ಆ ಪುರುಷ ಪುಂಗವರು ಮಂಚದ ಮೇಲೆ ಮೈಚಾಚುತ್ತಿದ್ದಂತೆ ಆ ದೃಶ್ಯಾವಳಿಗಳನ್ನು ರಹಸ್ಯ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದಳು.
ತೀಟೆ ತೀರಿದ ಮೇಲೆ ಮಂಚದಿಂದೆದ್ದ ಪುರುಷ ಪುಂಗವರಿಗೆ ರಾಜಕೀಯ ಸ್ತರದಲ್ಲಿ ಕೆಲಸ ಮಾಡಿಕೊಡುವಂತೆ ದುಂಬಾಲು ಬೀಳುತ್ತಿದ್ದಳು. ಇಲ್ಲವೇ ದುಡ್ಡಿಗೆ ಬೇಡಿಕೆಯಿಡುತ್ತಿದ್ದಳು. ಮೈಕೊಡವಿಕೊಂಡು ಅದೆಲ್ಲ ಆಗಾಕಿಲ್ಲ ಅಮ್ಮಿ ಅಂತ ಪುರುಷ ಪುಂಗವರು ಪುಂಗಿ ಊದಲು ಹೋದರೆ 'ಹಂಗಾ, ನೋಡೀವಂತೆ ಇರು ನಿನ್ನ ಪರಾಕ್ರಮ' ಅಂತ ವಿಡಿಯೋ ಬಿತ್ತರಿಸುತ್ತಿದ್ದಳು ಬಿತ್ತರಿ ತಾರಾ.
ಇಂತಿಪ್ಪ ತಾರಾಳ ಲ್ಯಾಪ್ ಟಾಪ್, ಸ್ಪೈ ಕ್ಯಾಮರಾ ಹಾಗೂ ಪರ್ಸನಲ್ ಡೈರಿಯನ್ನು ಬಂಜಾರಾ ಹಿಲ್ಸ್ ಪೊಲೀಸರು ವಶಪಡಿಸಿಕೊಂಡಿದ್ದು, 'ಶ್ರೀವಾರಿ ಮುಚ್ಚಟ್ಲು' ಬಯಲಿಗಿಡಲಿದ್ದಾರೆ. ಈ ಹಿಂದೆಯೂ ತಾರಾಳನ್ನು ಬಂಧಿಸಿದ್ದೆವು. ಆದರೆ ತನ್ನ ರಾಜಕೀಯ ಪ್ರಭಾವ ಬೀರಿ, ಮಾಯವಾಗುತ್ತಿದ್ದಳು.
ತಾರಾಳ ಗೆಳೆಯ ರತಿನೇನಿ ದುರ್ಗಾಪ್ರಸಾದನನ್ನು ಸಹ ಬಂಧಿಸಲಾಗಿದ್ದು, ದಿವಂಗತ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಜತೆ ತಾರಾ ಅದ್ಯಾವಗಲೋ ಫೋಟೋ ತೆಗೆಸಿಕೊಂಡಿದ್ದು, ಅದರಿಂದಲೇ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಅದೃಶ್ಯಂ, ರಾಕ್ಷಸುಡು, ಪ್ರಿಯಾ ಸಖಿ, ಲವ್ ಟಿಕೆಟ್ ಮುಂತಾದ ಚಿತ್ರಗಳಲ್ಲಿ ಈಕೆ ಅಭಿನಯಿಸಿದ್ದಾಳೆ.
ತೆಲುಗು ಸಿನಿಮಾದಲ್ಲಿ ಪಾತ್ರ ಕೊಡಿಸುವುದಾಗಿ ನಂಬಿಸಿ ತಾರಾ ಮೋಸ ಮಾಡಿದ್ದಾಳೆ ಎಂದು ವಿಶಾಖಪಟ್ಟಣದ ಯುವತಿಯೊಬ್ಬಳು ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು. ಅದಕ್ಕೂ ಮುನ್ನ ನಿರ್ದೇಶಕ ಚಿನ್ನಿ ಕೃಷ್ಣ ಜತೆಯೂ ತಾರಾ ರಂಪಾಟ ಮಾಡಿಕೊಂಡಿದ್ದಳು. ತಾರಾ ಅನೇಕ ಯುವತಿಯರಿಗೆ ಹೀಗೆ ಮೋಸ ಮಾಡಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.