ಜಯಲಲಿತಾ ಪ್ರತಿಕೃತಿ ದಹಿಸಿದ ಕನ್ನಡಿಗರು
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲೂ ಅನಗತ್ಯವಾಗಿ ಕರ್ನಾಟಕದ ವಿರುದ್ಧ ಜಯಲಲಿತಾ ಅವರು ಹೇಳಿಕೆಗಳನ್ನು ನೀಡುತ್ತಿರುವುದನ್ನು ಖಂಡಿಸಿ ಚಾಮರಾಜನಗರ ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟ, ರೈತಸಂಘದವರು ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಭುವನೇಶ್ವರಿ ವೃತ್ತದಲ್ಲಿ ಜಯಲಲಿತಾರ ಭಾವಚಿತ್ರ, ಪ್ರತಿಕೃತಿಯನ್ನು ದಹಿಸುವುದರ ಮೂಲಕ ಪ್ರತಿಭಟನೆ ನಡೆಸಿ ಜಯಲಲಿತಾ ಹಾಗೂ ತಮಿಳುನಾಡು ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜಯಲಲಿತಾ ಕರ್ನಾಟಕದಲ್ಲಿ ಅಣೆಕಟ್ಟು ಕಟ್ಟುತ್ತಿರುವುದನ್ನು ವಿರೋಧಿಸುತ್ತಿರುವುದು ನಾಚಿಕೆಗೇಡಿನ ವಿಷಯ. ಸರ್ಕಾರ ಕರ್ನಾಟಕ ನೆಲದಲ್ಲಿ ಅಣೆಕಟ್ಟು ಕಟ್ಟುತ್ತಿದೆ, ತಮಿಳುನಾಡಿನಲ್ಲಿ ಕಟ್ಟುತ್ತಿಲ್ಲ.
ಜಯಲಲಿತಾರವರು ಕನ್ನಡ ನೆಲದಲ್ಲೇ ಹುಟ್ಟಿ ಬೆಳೆದು ಇಂದು ಅಧಿಕಾರ ಆಸೆಗಾಗಿ ಕರ್ನಾಟಕದ ಬಗ್ಗೆ ಹಾಗೂ ಕರ್ನಾಟ ಕದ ನೆಲದಲ್ಲಿ ಕಟ್ಟುತ್ತಿರುವ ಅಣೆಕಟ್ಟಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಜಯಲಲಿತಾರ ಕನ್ನಡ ವಿರೋಧಿ ನೀತಿಯನ್ನು ತೋರಿಸುತ್ತಿದೆ ಎಂದು ಕರ್ನಾಟಕ ಸೇನಾ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿ ಜಯಲಲಿತಾರ ಕನ್ನಡ ವಿರೋಧಿ ವರ್ತನೆ ಮುಂದುವರಿದಲ್ಲಿ ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ. ಮುರುಳಿ ಎಚ್ಚರಿಸಿದರು.